ADVERTISEMENT

ಹಳ್ಳಕೊಳ್ಳ, ಸಮುದ್ರಗಳೆಲ್ಲ ಕಲುಷಿತ

ಸಮಸ್ಯೆ ಎನಿಸಿದ ವಿಶ್ವ ಜಲ ದಿನಾಚರಣೆ; ದ್ಯಾವಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 8:43 IST
Last Updated 24 ಮಾರ್ಚ್ 2017, 8:43 IST
ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಬಿ.ದ್ಯಾವಪ್ಪ ಉದ್ಘಾಟಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಬಿ.ದ್ಯಾವಪ್ಪ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ವಾರ್ಷಿಕ ಸರಾಸರಿ ಮಳೆ ಮಾತ್ರ ಬೀಳುತ್ತಿದೆ. ಆದರೆ ಕೆರೆಕುಂಟೆಗಳ ಹಾಗೂ ಗಿಡಮರಗಳ ನಾಶದಿಂದ ನೀರಿನ ಬರ ಎದುರಾಗಿದೆ.

ಆದ್ದರಿಂದ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಿ ಜಲಮೂಲಗಳನ್ನು ಸಂರಕ್ಷಿಸಿಕೊಂಡು, ಮಿತವಾಗಿ ಬಳಸಿದರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಬಿ.ದ್ಯಾವಪ್ಪ ಅಭಿಪ್ರಾಯಪಟ್ಟರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಲೀಗಲ್ ಫೋರಂ, ತಾಲ್ಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ವಿಶ್ವ ಜಲದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹನಿ ನೀರು ವ್ಯರ್ಥವಾದರೂ ದಿನದಲ್ಲಿ ಅದು ಒಬ್ಬ ವ್ಯಕ್ತಿಯ ಕುಡಿಯುವಷ್ಟು ನೀರು ವ್ಯರ್ಥವಾದಂತೆ. ವಿಶ್ವ ಜಲ ದಿನ ಈಗ ಜಲ ಸಮಸ್ಯೆ ದಿನವಾಗಿ ಆಚರಿಸುವ ಸಂದರ್ಭ ಬಂದೊದಗಿದೆ. ಸ್ತ್ರೀಶಕ್ತಿ ಸಂಘಗಳು ನೀರಿನ ಸಮಸ್ಯೆಗಳನ್ನು ಚರ್ಚಿಸಿ ಜಾಗೃತರಾಗಿ ಅದನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕರೆ ಕೊಟ್ಟರು.

ಹಿರಿಯ ಸಿವಿಲ್ ನ್ಯಾಯಾಧೀಶರ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧಕ್ಷ ಡಿ.ಪಿ. ಕುಮಾರಸ್ವಾಮಿ ಮಾತನಾಡಿ, ‘ಹಳ್ಳಿ, ಪಟ್ಟಣ, ಹಳ್ಳಕೊಳ್ಳ, ನದಿ, ಸಮುದ್ರಗಳೆಲ್ಲಾ ಇಂದು ಮಾನವನ ದುರ್ಬಳಕೆಯಿಂದ ಕಲುಷಿತವಾಗುತ್ತಿವೆ.

ಎಲ್ಲೋ ನೀರಿನ ಸಮಸ್ಯೆಯಾದರೆ ನನಗೇನು ಎನ್ನುವ ಬೇಜವಾಬ್ದಾರಿ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ನಾಗರಿಕರು ನೀರನ್ನು ಸಂರಕ್ಷಿಸುವಲ್ಲಿ ನಮ್ಮ ಹೊಣೆಗಾರಿಕೆ ಏನು ಎಂದು ಚಿಂತಿಸಿ ಆ ಪ್ರಕಾರ ಕಾರ್ಯಪ್ರವೃತ್ತರಾಗುವುದು ಅಗತ್ಯ’ ಎಂದರು.

ತಾಲೂಕು ಲೀಗಲ್ ಫೋರಂನ ಅಧ್ಯಕ್ಷ ಎ.ಆರ್. ನಾಗರಾಜನ್‌ ಮಾತನಾಡಿ, ನೀರಿಗಾಗಿ ಮಹಾಯುದ್ಧಗಳು ನಡೆಯುವ ಕಾಲ ಸನ್ನಿಹಿತವಾಗಿದೆ ಎಂದರು.ವಕೀಲ ರವಿ ಮಾವಿನಕುಂಟೆ, ವಕೀಲ ಲೋಕೇಶ್ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ನಾಗಭೂಷಣ್  ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ ವಹಿಸಿದ್ದರು. ತಾಲ್ಲೂಕು ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ಮೋಹನ್, ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

*
ಹಿಂದೆ ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ವಿಶಾಲವಾದ ತಿಮ್ಮಣ್ಣನ ಕುಂಟೆ ಈಗ ತೋಟಗಾರಿಕಾ ಇಲಾಖೆ, ಬಸ್‌ ಡಿಪೊ, ಬಸ್‌ ನಿಲ್ದಾಣ ಹಾಗೂ ನಗರಸಭೆ ಕಚೇರಿ ಆಗಿದೆ. ನಾಗರಕೆರೆ ಒತ್ತುವರಿಯಾಗುತ್ತಿದೆ.
-ಎ.ಆರ್. ನಾಗರಾಜನ್ , ಲೀಗಲ್ ಫೋರಂ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.