ದೊಡ್ಡಬಳ್ಳಾಪುರ: ಮಾನಸಿಕರೋಗಿಗಳನ್ನು ಪಶುಗಳಂತೆ ಹಿಂಸಿಸುವುದು ತರವಲ್ಲ. ಇದು ಅಂಟು ರೋಗವಲ್ಲ. ಮನೋರೋಗಕ್ಕೆ ಚಿಕಿತ್ಸೆ ಹಾಗೂ ಪರಿಹಾರವಿದ್ದು, ಈ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದು ಗ್ರಾಮೀಣ ಅಭ್ಯುದಯ ಸೇವಾಸಂಸ್ಥೆ ಕಾರ್ಯದರ್ಶಿ ಅಮಲಿನಾಯ್ಕ್ ಹೇಳಿದರು.
ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ಚಿಕಿತ್ಸಾ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾನಸಿಕ ಕಾಯಿಲೆಯು ನಾಲ್ಕು ಜನರಲ್ಲಿಒಬ್ಬರಿಗೆ ಇದ್ದು ತೀವ್ರತರವಾಗಿ ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿದೆ. ಮಾನಸಿಕ ಆರೋಗ್ಯವನ್ನು ಕಡೆಗಣಿಸಲಾಗುತ್ತಿದೆ. ಮಾನಸಿಕ ರೋಗಿಗಳ ಕೂಗು ಕಂಡರೂ ಕಾಣದಂತೆ ನಮ್ಮ ಪಾಡಿಗೆ ನಾವು ಇದ್ದೇವೆ ಈ ಬಗ್ಗೆ ಜಾಗೃತಿ ಮೂಡಬೇಕು ಎಂದರು.
ತಾಲ್ಲೂಕು ಆಸ್ಪತ್ರೆಗೆ ಒಬ್ಬರಂತೆ ಮಾನಸಿಕ ರೋಗ ತಜ್ಞರನ್ನು ನೇಮಿಸುವುದು. ಪ್ರತಿ ತಿಂಗಳಿಗೊಮ್ಮೆ ಮಾನಸಿಕ ರೋಗಿಗಳ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಜರುಗಿಸಲು ಕ್ರಮಕೈಗೊಳ್ಳುವುದು. ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಮಾನಸಿಕ ಕಾಯಿಲೆಗೆ ಮತ್ತು ಮೂರ್ಛೆ ಕಾಯಿಲೆಗೆ ಸಂಬಂಧಿಸಿದ ಔಷಧ ಮಾತ್ರೆಗಳು ಸಿಗುವಂತೆ ಕ್ರಮಕೈಗೊಳ್ಳಬೇಕು ತೀವ್ರತರ ಮಾನಸಿಕ ಕಾಯಿಲೆಗೆ ಒಳಗಾಗಿರುವ ವ್ಯಕ್ತಿಗಳಿಗೆ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಶೇ.೩ ರಷ್ಟು ಅನುದಾನದಲ್ಲಿ ಔಷದ ಮಾತ್ರೆಗಳಿಗೆ ಮತ್ತು ಚಿಕಿತ್ಸೆಗೆ ಹಣ ಮೀಸಲಿಡಬೇಕು. ಮಾನಸಿಕ ಚಿಕಿತ್ಸೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.