ವಿಜಯಪುರ: ಸತತ ಐದಾರು ವರ್ಷಗಳಿಂದ ಜಿಲ್ಲೆಯನ್ನು ಬೆನ್ನು ಬಿಡದೆ ಕಾಡುತ್ತಿರುವ ತೀವ್ರ ಬರಗಾಲದಿಂದಾಗಿ ರೈತಾಪಿ ವರ್ಗ ಕಂಗಾಲಾಗಿದೆ. ಈ ವರ್ಷವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದರೆ ಬರಗಾಲದ ಕಾರ್ಮೋಡ ಕಳೆಯಲಿದೆ ಎಂಬ ಆಶಾಭಾವನೆಯಲ್ಲೆ ರೈತರು ಕಾಲಕಳೆಯುತ್ತಾ ಆಕಾಶದತ್ತ ಮುಖ ಮಾಡುವಂತಾಗಿದೆ.
ಒಂದು ತಿಂಗಳ ಹಿಂದೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಆಗಿದ್ದ ಮಳೆಯಿಂದಾಗಿ ರೈತರು ಪುಳಕಿತರಾಗಿದ್ದರು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಸತತವಾಗಿ ಬರಗಾಲವಿದ್ದರೂ ಬಿತ್ತನೆ ಬೀಜಗಳ ಕ್ರೋಡೀಕರಣ, ರಸಗೊಬ್ಬರಗಳ ಶೇಖ ರಣೆ, ಭೂಮಿ ಉಳುಮೆ ಹೀಗೆ ಹಲ ವಾರು ಬಗೆಯ ಬಂಡವಾಳಗಳಿಗೆ ಈಗಾ ಗಲೇ ಮನೆಗಳಲ್ಲಿದ್ದ ಚಿನ್ನಾಭರಣ ಗಿರವಿ ಇಟ್ಟು ಭೂಮಿ ಹದಗೊಳಿಸಿ ಕೊಂಡಿ ದ್ದಾರೆ. ಮದುವಣಗಿತ್ತಿಯಂತೆ ಸಿಂಗಾರ ಗೊಂಡಿರುವ ಭೂಮಿ ಇದುವರೆಗೂ ಒಂದು ಹನಿ ಮಳೆ ನೀರು ಕಂಡಿಲ್ಲ ದಿರುವುದು ಆತಂಕಕ್ಕೆ ಈಡು ಮಾಡಿದೆ.
10 ಸಾವಿರ ಹೆಕ್ಟೇರ್ ಗುರಿ : ದೇವನ ಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಯಾಧಾರಿತ ಭೂಮಿಯೆ ಹೆಚ್ಚಾಗಿರುವ ಪ್ರದೇಶದಲ್ಲಿ, ಕೃಷಿ ಇಲಾಖೆ 10,000 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಬಿತ್ತನೆ ಮಾಡುವ ಗುರಿ ಹೊಂದಿತ್ತು. ಮಳೆಯ ಕೊರತೆ ಯಿಂದಾಗಿ ಇದುವರೆಗೂ ಕೇವಲ ಎಲ್ಲಾ ಬೆಳೆಗಳು ಸೇರಿ, 175 ಹೆಕ್ಟೇರ್ನಲ್ಲಿ ಬಿತ್ತನೆ ಕಾರ್ಯವಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.
ಮಳೆ ಕೈ ಕೊಟ್ಟಿರುವುದರಿಂದ ಗ್ರಾಮೀಣ ಭಾಗದಲ್ಲಿ ಬೇಸಿಗೆಯಂತೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗುವ ಆತಂಕ ಜನರಲ್ಲಿದೆ.
ಮಳೆಯ ತೀವ್ರ ಕೊರತೆಯ ಪರಿಣಾ ಮವಾಗಿ ಎಲ್ಲೆಲ್ಲೂ ಸ್ವಚ್ಛತೆ ಮರೀಚಿ ಕೆಯಾಗುತ್ತಿವೆ. ಎಲ್ಲೆಂದರಲ್ಲಿ ತುಂಬಿ ಹೋಗಿರುವ ಕಸದ ರಾಶಿ, ಸ್ವಚ್ಛತೆಗೆ ನೀರಿನ ಅಭಾವದ ಕೊರತೆ, ಹಾಗೂ ಮೋಡ ಮುಸುಕಿದ ತಣ್ಣನೆಯ ವಾತಾವರಣದಿಂದಾಗಿ ಜ್ವರದ ಪ್ರಕರಣ ಹೆಚ್ಚಾಗುತ್ತಿದೆ.
**
ಮೋಡ ಬಿತ್ತನೆ ಯಾಕಿಲ್ಲ?
ನಿರಂತರವಾಗಿ ಬರಗಾಲವನ್ನೇ ಬೆನ್ನಿಗೇರಿಸಿಕೊಂಡಿರುವ, ಶಾಶ್ವತ ನೀರಾವರಿ ಯೋಜನೆಗಳಿಂದ ವಂಚಿತವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಏಕೆ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬಾರದೆಂದು ನಂಜುಂ ಡಪ್ಪ ಮತ್ತಿತರ ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ಸರ್ಕಾರ ₹ 30 ಕೋಟಿ ವೆಚ್ಚದಲ್ಲಿ ಉತ್ತರ ಕರ್ನಾಟಕದ ಬಹುತೇಕ ಬರಪೀಡಿತ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಮುಂದಾಗಿದೆ ಎಂದು ಅವರು ವಿವರಿಸಿದ್ದಾರೆ.
**
ಜೂನ್, ಜುಲೈ ತಿಂಗಳಲ್ಲಿ ಮಳೆಯಾಗಿದ್ದರೆ ಕನಿಷ್ಠ ಶೇ 60 ರಷ್ಟು ಬಿತ್ತನೆ ಕಾರ್ಯ ಆಗಬೇಕಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ
-ಮಂಜುಳಾ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ
*
-ಎಂ. ಮುನಿನಾರಾಯಣ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.