ಅಥಣಿ: ‘ಕಾಗವಾಡ ಹಾಗೂ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ಅವರ ಮನೆ ಕೆಲಸ ಮಾಡುತ್ತೇನೆ’ ಎಂದು ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರಮಗೌಡ (ರಾಜು) ಕಾಗೆ ಸವಾಲು ಹಾಕಿದರು.
ಪಟ್ಟಣದಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಕನಸು. ನಾವು, ಅಥಣಿ ಹಾಗೂ ಕಾಗವಾಡದಲ್ಲಿ 20 ವರ್ಷಗಳ ಹಿಂದೆಯೇ ಇದನ್ನು ಮಾಡಿದ್ದೇವೆ. ಅಥಣಿಯಲ್ಲಿ ಪುರಸಭೆ, ಪಿಎಲ್ಡಿ ಬ್ಯಾಂಕ್, ಸಕ್ಕರೆ ಕಾರ್ಖಾನೆ, ಎಪಿಎಂಸಿ ಎಲ್ಲವೂ ಬಿಜೆಪಿ ಕೈಯಲ್ಲಿವೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ’ ಎಂದರು.
‘ಲಕ್ಷ್ಮಣ ಸವದಿ ಸೋಲಿಸಲು ಅಥಣಿಯಲ್ಲಿ ಮನೆ ಮಾಡುತ್ತೇನೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಅವರ ಅಂಗಡಿ ಬಿಟ್ಟು ಬೇರೆಯವರ ಅಂಗಡಿ ಮುಚ್ಚಿಸಲು ಇಲ್ಲಿಗೆ ಬರುತ್ತಾರಂತೆ’ ಎಂದು ಲೇವಡಿ ಮಾಡಿದರು.
**
ನಾನು ಲಿಂಗಾಯತ. ಜಾತಿ ನೋಡಿ ಮತ ಹಾಕಬೇಡಿ. ಕ್ಷೇತ್ರದ ಅಭಿವೃದ್ಧಿಗಾಗಿ ಮತ ಹಾಕಿ. ಮಾಡಿರುವ ಅಭಿವೃದ್ಧಿ ಕೆಲಸಗಳು ಕೈಹಿಡಿಯುತ್ತವೆ. ನನಗೆ ಪ್ರತಿಸ್ಪರ್ಧಿಯೇ ಇಲ್ಲ
– ಲಕ್ಷ್ಮಣ ಸವದಿ, ಬಿಜೆಪಿ ಅಭ್ಯರ್ಥಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.