ಎಂ.ಕೆ.ಹುಬ್ಬಳ್ಳಿ: ‘ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಹೆಚ್ಚು ಅಂತರದಿಂದ ಗೆಲ್ಲಿಸಿದ್ದಕ್ಕಾಗಿ, ಕಿತ್ತೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ’ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಇಲ್ಲಿಗೆ ಸಮೀಪದ ದಾಸ್ತಿಕೊಪ್ಪ ಗ್ರಾಮದ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರು ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರ ಸತ್ಕಾರ ಸ್ವೀಕರಿಸಿ ಮಾತನಾಡಿದರು.
‘ಮೂರು ತಿಂಗಳಿಗೊಮ್ಮೆ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಭೇಟಿನೀಡಿ ಸ್ಥಿತಿಗತಿ ವಿಚಾರಿಸುತ್ತೇನೆ. ನೀರಾವರಿ ಸೌಲಭ್ಯ ಕಲ್ಪಿಸಿ ಕೆರೆಗಳಿಗೆ ಆದಷ್ಟು ಶೀಘ್ರದಲ್ಲೇ ನೀರು ಹರಿಸಲು ಪ್ರಯತ್ನಿಸುತ್ತೇನೆ. ಈಗಾಗಲೇ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದರು.
ಬಿಜೆಪಿ ರೈತ ಮೋರ್ಚಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಸಿದ್ರಾಮನಿ ಮಾತನಾಡಿ, ‘ಸಹಕಾರಿ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಮಹಾಂತೇಶ ಅವರಿಗೆ ನಮ್ಮ ಕ್ಷೇತ್ರದ ಮತದಾರರು ಅಪೂರ್ವ ಗೆಲುವು ನೀಡಿದ್ದಾರೆ’ ಎಂದರು.
ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ, ಬಸವೇಶ್ವರ ದೇವಸ್ಥಾನದ ಬಳಿ ಅಭಿವೃದ್ಧಿ ಕಾರ್ಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಸದಸ್ಯರು ಶಾಸಕರಿಗೆ ಮನವಿ ಸಲ್ಲಿಸಿದರು. ಶಾಸಕ ಮಹಾಂತೇಶ ದೊಡಗೌಡರ ದಂಪತಿಯನ್ನು ಸತ್ಕರಿಸಲಾಯಿತು.
ರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಮಹಾಂತೇಶ ದೊಡಗೌಡರ ಪತ್ನಿ ಮಂಜುಳಾ ದೊಡಗೌಡರ, ಅವರ ಪುತ್ರಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಲ್ಲವ್ವ ರಾವಳ, ಉಪಾಧ್ಯಕ್ಷೆ ಗಂಗವ್ವ ಕಿಲಾರಿ, ಉಳವಪ್ಪ ಉಳಾಗಡ್ಡಿ, ಪಾರೀಶ ಬಾವಿ, ಪ್ರಕಾಶ ಮೂಗಬಸವ, ಶ್ರೀಕರ ಕುಲಕರ್ಣಿ, ಈರಪ್ಪ ಸಿದ್ರಾಮನಿ, ಕರಗೌಡ ಪಾಟೀಲ, ಪ್ರಕಾಶ ಸಿದ್ಧನವರ, ಬಿ.ಕೆ. ಪಾಟೀಲ, ಜಮಾದಾರ, ಆರ್.ಎ. ಸಿದ್ರಾಮನಿ, ಉಮೇಶ ಸಿದ್ರಾಮನಿ, ಹೈದರಲಿ ಖಾಶೀಮನವರ, ವಿಜಯ ಅರಳಿಕಟ್ಟಿ, ಈರಣಗೌಡ ಪಾಟೀಲ, ಅದೃಶ್ಯಪ್ಪ ಕೊತ್ತಲಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.