ADVERTISEMENT

ಗೋಕಾಕಿಗೆ ಜಿಲ್ಲಾ ಮಾನ್ಯತೆ: ಶ್ರೀಗಳಿಗೆ ಹೋರಾಟದ ನೇತೃತ್ವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:09 IST
Last Updated 13 ಡಿಸೆಂಬರ್ 2017, 9:09 IST
ಸಭೆಯಲ್ಲಿ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮಿತಿ ಅಧ್ಯಕ್ಷ ಶೂನ್ಯ ಸಂಪಾದನಮಠದ ಪೀಠಾಧಿಪತಿ  ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು
ಸಭೆಯಲ್ಲಿ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮಿತಿ ಅಧ್ಯಕ್ಷ ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು   

ಗೋಕಾಕ: ಗೋಕಾಕಿಗೆ ಪ್ರತ್ಯೇಕ ಜಿಲ್ಲಾ ಸ್ಥಾನಮಾನ ನೀಡಲು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ನೇತೃತ್ವವನ್ನು ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗೆ ನೀಡಲು ಮಂಗಳವಾರ ನಿರ್ಧರಿಸಲಾಯಿತು.

ಶೂನ್ಯ ಸಂಪಾದನಮಠದ ಆವರಣದಲ್ಲಿ ಕರೆದಿದ್ದ ಹೋರಾಟದ ಸಭೆಯಲ್ಲಿ ಗೋಕಾಕ ಜಿಲ್ಲಾ ರಚನೆ ಚಾಲನಾ ಸಮಿತಿ ಅಧ್ಯಕ್ಷ ಬಸಗೌಡ ಪಾಟೀಲ (ಕಲ್ಲೋಳಿ) ಅವರು ಚಾಲನಾ ಸಮಿತಿ ಅಧ್ಯಕ್ಷರನ್ನಾಗಿ ಸ್ವಾಮೀಜಿಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ಘೋಷಿಸಿದರು.

ಪ್ರತ್ಯೇಕ ಜಿಲ್ಲೆಗಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಯುತ್ತಲೇ ಇದ್ದರೂ ಸಂಬಂಧಿಸಿದವರು ಗಮನಹರಿಸುತ್ತಿಲ್ಲ. ಹೋರಾಟವನ್ನು ಮತ್ತಷ್ಟು ಸಂಘಟಿತಗೊಳಿಸಲು ಸ್ವಾಮೀಜಿ ಹಾಗೂ ಜಾರಕಿಹೊಳಿ ಸಹೋದರರ ಮಾರ್ಗದರ್ಶನ ಪಡೆಯಲಾಗುವುದು ಎಂದರು.

ADVERTISEMENT

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಪ್ರತ್ಯೇಕ ಜಿಲ್ಲೆ ಬೆಂಬಲಿಸುವ ಎಲ್ಲ ಜನಪ್ರತಿನಿಧಿಗಳು, ಮುಖಂಡರು ಪಕ್ಷಾತೀತವಾಗಿ ಒಂದೇ ವೇದಿಕೆಯಡಿ ಬರಬೇಕು. ಹೋರಾಟಕ್ಕೆ ಎಲ್ಲ ರಾಜಕೀಯ ಮುಖಂಡರನ್ನು ಕರೆತರಲು ಶ್ರೀಗಳನ್ನು ಕೋರಲಾಗಿದೆ ಎಂದರು.

ಜಿಲ್ಲೆ ರಚನೆ ಸಂಬಂಧ ಜಾರಕಿಹೊಳಿ ಸಹೋದರರ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು. ಇದೇ 21ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗೋಕಾಕ ನಗರಕ್ಕೆ ಭೇಟಿ ನೀಡಲಿದ್ದಾರೆ. ಆಗ ಮನವಿ ಸಲ್ಲಿಸಲಾಗುವುದು. ನಂತರ ಹೋರಾಟದ ರೂಪು,ರೇಷೆಗಳನ್ನು ಹಾಕಿಕೊಳ್ಳೋಣ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.