ಚನ್ನಮ್ಮನ ಕಿತ್ತೂರು: ‘ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಜನತಾದಳ (ಜಾತ್ಯತೀತ) ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದೆ ಅಷ್ಟೇ. ಆದರೆ ಆ ಪಕ್ಷ ಸೇರುವುದಿಲ್ಲ. ಆದರೆ ಷರತ್ತು ಬದ್ಧ ಬೆಂಬಲ ನೀಡುವುದಾಗಿ ಘೋಷಿಸಿದ್ದೇನೆ’ ಎಂದು ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಬಾಗೌಡ ಪಾಟೀಲ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದ ಅವರು ‘ಜೆಡಿಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಬಾಬಾಗೌಡರು ಆ ಪಕ್ಷ ಸೇರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಜನರ ಅನುಮಾನ ದೂರವಾಗಬೇಕಾಗಿದೆ’ ಎಂದರು.
‘ರೈತರ ಸಾಲ ಮನ್ನಾ ಮಾಡಬೇಕು, ಹಿರಿಯ ನಾಗರಿಕರಿಗೆ ಮಾಸಿಕ ₹ 5 ಸಾವಿರ ಪಿಂಚಣಿ ನೀಡಬೇಕು, ದೊಡ್ಡ ಕಾರ್ಯಕ್ರಮ ಹಾಕಿಕೊಂಡು ಕೆರೆ, ಹೊಂಡಗಳಿಗೆ ನೀರು ತುಂಬಿಸಬೇಕು.
ನದಿಗಳಿಗೆ ಚೆಕ್ ಡ್ಯಾಮ್ ನಿರ್ಮಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಸಂಬಂಧ ಕಾನೂನು ರೂಪಿಸಬೇಕು’ ಎಂಬ ಷರತ್ತುಗಳನ್ನು ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರಿಗೆ ಹಾಕಲಾಗಿದೆ. ಇದಕ್ಕೆ ಸಮ್ಮತಿಸಿದ ಅವರು ಪರಿಹಾರಕ್ಕಾಗಿ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದ್ದಾರೆ’ ಎಂದು ಬಾಬಾಗೌಡರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.