ADVERTISEMENT

ಬೆಳಗಾವಿ ಬೀಟ್‌ ವ್ಯವಸ್ಥೆಗೆ ಪ್ರಶಂಸೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:38 IST
Last Updated 18 ಏಪ್ರಿಲ್ 2017, 6:38 IST

ಬೆಳಗಾವಿ: ಜಿಲ್ಲೆಯಲ್ಲಿ ಆರಂಭ ಆಗಿರುವ ಗಸ್ತು (ಬೀಟ್‌) ವ್ಯವಸ್ಥೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದರಿಂದಾಗಿ ಪೊಲಿಸ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು, ವಿಶೇಷವಾಗಿ ಉತ್ತರವಲಯ ಪೊಲೀಸ್‌ ಹಾಗೂ ಸಾರ್ವಜನಿಕರ ಮಧ್ಯೆ ಉತ್ತಮ ಸಂಬಂಧ ಏರ್ಪಟ್ಟಿದೆ ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ರೂಪಕ್ ಕುಮಾರ್‌ ದತ್ತ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಉತ್ತರ ವಲಯ ಪೊಲೀಸ್‌ ಹಾಗೂ ಬೆಳಗಾವಿ ನಗರ ಪೊಲೀಸ್‌ ಕಮಿಷನರೇಟ್ ಆಯೊಜಿಸಿದ್ದ ಸುಧಾರಿತ ಗಸ್ತು ವ್ಯವಸ್ಥೆ ಹಾಗೂ ಗಸ್ತು ಸದಸ್ಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಪೊಲೀಸ್‌ ಇಲಾಖೆಯಲ್ಲಿ ಶೇ10 ರಷ್ಟು ಅಧಿಕಾರಿಗಳಿದ್ದು, ಇನ್ನುಳಿದ ಶೇ 90ರಷ್ಟು ಸಿಬ್ಬಂದಿ ಪೊಲೀಸರಿದ್ದಾರೆ. ನೂತನ ಉಪ ಗಸ್ತು ವ್ಯವಸ್ಥೆಯಲ್ಲಿ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ.  ಹೆಡ್‌ ಕಾನ್‌ಸ್ಟೆಬಲ್ ಹಾಗೂ ಎ.ಎಸ್.ಐ ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಜವಾಬ್ದಾರಿ ನೀಡ ಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಠಾಣೆಗಳನ್ನು ನಾಗರಿಕ ಸ್ನೇಹಿಯಾಗಿಸಲು ಪ್ರತಿ ಠಾಣೆಗೆ ₹1 ಲಕ್ಷ ಅನುದಾನ ಬಿಡುಗಡೆ ಮಾಡಿದೆ.  ಠಾಣೆಗೆ ಬರುವ ನಾಗರಿಕರಿಗೆ ಅಗತ್ಯವಿರುವ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಶೌಚಾ ಲಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ADVERTISEMENT

ನಮಗೆ ದೂರು ಸಲ್ಲಿಸಿ: ದೂರು ನೀಡಲು ತೆರಳಿದಾಗ ಠಾಣೆಗಳಲ್ಲಿ ಉತ್ತಮ ಸ್ಪಂದನೆ ದೊರೆಯದಿದ್ದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಅಥವಾ ತಮಗೆ ನೇರವಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ಅವರು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬೆಳಗಾವಿ ಉತ್ತರ ವಲಯ ಪೊಲೀಸ್‌ ಮಹಾ ನಿರೀಕ್ಷಕ ಡಾ.ಕೆ. ರಾಮಚಂದ್ರ ರಾವ್, ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಆರಂಭವಾದ ಸುಧಾರಿತ ಉಪ ಗಸ್ತು ವ್ಯವಸ್ಥೆ ಇಂದು ರಾಜ್ಯದಾ ದ್ಯಂತ ವಿಸ್ತರಣೆಗೊಂಡಿದೆ.  ಉತ್ತರ ವಲಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ನಾಗರಿಕರಿಂದ ಸುಧಾರಿತ ಗಸ್ತು ವ್ಯವಸ್ಥೆಗೆ ಉತ್ತಮ ಬೆಂಬಲ ಮತ್ತು  ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉತ್ತರ ವಲಯ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಧಾರವಾಡ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 600 ಜನ ಸುಧಾರಿತ ಗಸ್ತು ಸಮಿತಿ ಸದಸ್ಯರು ಗಸ್ತು ವ್ಯವಸ್ಥೆಯ ಕಾರ್ಯವೈಖರಿ ಹಾಗೂ ಸುಧಾರಣೆ ಕುರಿತು ರೂಪಕುಮಾರ ದತ್ತ ಅವರೊಂದಿಗೆ ಸಂವಾದ ನಡೆಸಿದರು.
ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಆರ್. ರವಿಕಾಂತೇ ಗೌಡ ವಂದಿಸಿದರು.

ವಿಜಯಪುರದ ಎಸ್ಪಿ ಎಸ್.ಎನ್. ಸಿದ್ದರಾಮಪ್ಪ, ಗದಗ ಎಸ್ಪಿ ಕೆ.ಸಂತೋಷ ಬಾಬು, ಬಾಗಲಕೋಟೆ ಎಸ್ಪಿ ಸಿ.ಬಿ. ರಿಷ್ಯಂತ, ಡಿಸಿಪಿ ರವೀಂದ್ರ ಗಡಾದಿ, ಶಿವಕುಮಾರ ಗಣಾರಿ, ನಗರ ಪೊಲೀಸ್‌ ಉಪ ಆಯುಕ್ತರಾದ ಅಮರನಾಥ ರೆಡ್ಡಿ, ಜಿ.ರಾಧಿಕಾ ವೇದಿಕೆಯಲ್ಲಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.