ಚನ್ನಮ್ಮನ ಕಿತ್ತೂರು: ಕಿತ್ತೂರಿಗೆ ಬರುವ ಜನರಿಗೆ ಇಲ್ಲಿಯ ಇಬ್ಬರು ಅಂಗಡಿಕಾರರು ಶುದ್ಧ ಕುಡಿಯುವ ನೀರು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ. ಬಿರು ಬೇಸಿಗೆ ಪ್ರಹಾರಕ್ಕೆ ಸಿಕ್ಕು ಪ್ರಯಾಣಿಕರು ‘ಉಸ್ಸಪ್ಪ’ ಎಂದು ಬಸವಳಿದಾಗ ನೀರು ಬೇಡುವುದು ಸಹಜ. ಇಂತಹ ಪರ ಊರಿನ ಗ್ರಾಮಸ್ಥರ ನೀರಿನ ದಾಹ ತಣಿಸಲು ಇಲ್ಲಿಯ ವ್ಯಾಪಾರಸ್ಥರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿನ ಅನ್ನಪೂರ್ಣ ಟ್ರೇಡರ್ಸ್ ಹಾಗೂ ರೇಣುಕಾ ವೈನ್ ಶಾಪ್ನವರು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ರಾಣಿ ಚನ್ನಮ್ಮ ಪುತ್ಥಳಿ ಎದುರಿಗಿರುವ ಅಂಡರ್ಪಾಸ್ನಲ್ಲಿ ಈ ವ್ಯವಸ್ಥೆ ಮಾಡಿದ್ದಾರೆ. ‘ಹುಬ್ಬಳ್ಳಿಯಂತಹ ನಗರ ಪ್ರದೇಶಗಳಲ್ಲಿ ಅದರಲ್ಲೂ ಹೆಚ್ಚು ಜನತೆ ಸಂಚರಿಸುವ ಜಾಗೆಯಲ್ಲಿ ನೀರನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ರೂಪಾಯಿ ಅಥವಾ ಎರಡು ರೂಪಾಯಿಗೆ ಮಾರುವುದನ್ನು ನೋಡಿದ್ದೇವೆ. ಬಾಟಲಿ ನೀರು ಬೇಕೆಂದರೆ ಕೊಳ್ಳಲು 20ರೂಪಾಯಿ ತೆರಬೇಕು.
ಇಷ್ಟು ದುಡ್ಡು ಕೊಟ್ಟರೆ ನಮ್ಮೂರಿನಲ್ಲಿ ಅರ್ಧ ಲೀಟರ್ ಹಾಲು ಸಿಕ್ಕುತ್ತದೆ. ಕುಡಿಯುವ ನೀರಿನಲ್ಲೂ ವ್ಯವಹಾರ ನಡೆಸಲು ಇಚ್ಛಿಸದ ಪುಣ್ಯಾತ್ಮರು, ಜನರ ದಾಹ ತಣಿಸಲು ಮುಂದಾಗಿರುವುದು ಮೆಚ್ಚಬೇಕಾದ ವಿಷಯ’ ಎಂದು ಗಂಗಮ್ಮ ಗೌಡರ ಹೇಳಿದರು.
‘ಸುಮಾರು 20 ಲೀಟರ್ ಕುಡಿಯುವ ನೀರಿನ ಎರಡು ಪ್ರತ್ಯೇಕ ಪ್ಲಾಸ್ಟಿಕ್ ಕ್ಯಾನ್ಗಳನ್ನು ಅಂಡರ್ಪಾಸ್ನಲ್ಲಿ ಇಡಲಾಗಿದೆ. ಕುಡಿಯಲು ಪ್ಲಾಸ್ಟಿಕ್ ಗ್ಲಾಸ್ಗಳನ್ನು ಇಡಲಾಗಿದೆ. ಮುಂಜಾನೆ ತಂದು ಅಲ್ಲಿ ಇಡುತ್ತೇವೆ. ಸಂಜೆ ಆಯಿತೆಂದರೆ ಮತ್ತೆ ಅವುಗಳನ್ನು ತೆಗೆದುಕೊಂಡು ಹೋಗುತ್ತೇವೆ’ ಎಂದು ಅನ್ನಪೂರ್ಣ ಟ್ರೇಡರ್ಸ್ನ ಮಾಲೀಕ ಶಂಕರ ಇಟಗಿ ದೌಲತ್ ಪರಂಡೇಕರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.