ಮೂಡಲಗಿ: ‘ಡೊಳ್ಳು, ವಾಲಗ, ತಮಟೆ, ಗಂಟೆ ವಾದ್ಯಗಳ ಝೇಂಕಾರ, ಭಜನೆ, ಶಹನಾಯಿಗಳ ನಿನಾದ, ಚಾಮರ, ದೀವಿಟಿಗೆಗಳ ಪ್ರದರ್ಶನದ ಮಧ್ಯ ಸೇರಿದ ಸಹಸ್ರ ಸಂಖ್ಯೆಯ ಭಕ್ತರ ಮುಗಿಲು ಮುಟ್ಟುವ ಜಯಘೋಷದಲ್ಲಿ ಸಮೀಪದ ಸುಣಧೋಳಿಯ ಪವಾಡ ಪ್ರಸಿದ್ಧಿಯ ಜಡಿಸಿದ್ಧೇಶ್ವರ ರಥೋತ್ಸವವು ಪೀಠಾಧಿಪತಿ ಶಿವಾನಂದ ಸ್ವಾಮಿ
ಗಳ ಸಾನಿಧ್ಯದಲ್ಲಿ ಶನಿವಾರ ಸಂಜೆ ಜರುಗಿತು.
‘ಹಗ್ಗ ಕಟ್ಟಿ ಎಳೆಯದೆ ಸಾಗುವ ರಥ’ ಎಂದು ಪ್ರವಾಡ ಪ್ರಸಿದ್ಧಿಯನ್ನು ಹೊಂದಿರುವ ಜಡಿಸಿದ್ಧೇಶ್ವರ ರಥೋತ್ಸವದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ ಸನ್ನಿಧಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಗ್ರಾಮಾಂತರ ಮೆರವಣಿಗೆ ಜರುಗಿತು.ಸೂರ್ಯೋದಯವಾಗುತ್ತಿದ್ದಂತೆ ತಿಗಡಿ, ಮುಸಗುಪ್ಪಿ, ಪಟಗುಂದಿ, ಭೈರನಟ್ಟಿ, ಲಕ್ಷ್ಷೇಶ್ವರ, ಹೊನಕುಪ್ಪಿ ಮತ್ತು ಗೋಸಬಾಳ ಗ್ರಾಮದೇವರ ಪಾಲಕಿಗಳನ್ನು ಬರಮಾಡಿಕೊಂಡರು. ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಮಠದ ಸಂಪ್ರದಾಯದಂತೆ ರಥವನ್ನು ಏರಿದ ನಂತರ ಸೇರಿದ ಭಕ್ತರೆಲ್ಲರೂ ‘ಹರ, ಹರ ಮಹಾದೇವ....’ ಎಂದು ಒಕ್ಕೋರಲಿನಲ್ಲಿ ಜಪವನ್ನು ಹೇಳುತ್ತಿದ್ದಂತೆ ರಥವು ಮಠದ ಸ್ಥಳದಿಂದ ಸಾಗಿ ಮತ್ತೆ ಮರಳಿ ಮೂಲ ಸ್ಥಳವನ್ನು ಸೇರಿತು.
ಮಠದ ಆವರಣವು ಸೇರಿದಂತೆ ಸುತ್ತಮುತ್ತಲಿನ ಮನೆ, ಕಟ್ಟಡಗಳ ಮಾಳಿಗೆ, ಮರಗಳ ಮೇಲೆ ಒಂದಿಷ್ಟೂ ಸ್ಥಳವನ್ನು ಬಿಡದೆ ಜನರು ಕುಳಿತುಕೊಂಡ ರಥೋತ್ಸವವನ್ನು ಕಣ್ಣುತುಂಬಿಕೊಂಡರು. ಜನರು ರಥವು ಸಾಗಿ ಮರಳಿ ಬರುವ ದಾರಿಯುದ್ದಕ್ಕೂ ತೆಂಗು, ಬಾಳೆಹಣ್ಣು, ಉತ್ತತ್ತಿ, ಬತ್ತಾಸು, ಹೂವುಗಳನ್ನು ಸಮರ್ಪಿಸಿ ಪುಣಿತರಾದರು.
ರಥೋತ್ಸವದ ನಂತರ ಜರುಗಿದ ಅನ್ನಸಂತರ್ಪಣೆಯಲ್ಲಿ ಜಾತಿ, ಮತ, ಮೇಲು, ಕೀಳು ಬೇಧ ಇಲ್ಲದೆ ಸಹಸ್ರಾರು ಜನರು ಭಾಗವಹಿಸಿ ಭಾವೈಕ್ಯತೆಗೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.