ADVERTISEMENT

ರೋಬೊಟಿಕ್ ತಂತ್ರಜ್ಞಾನ ಉತ್ತೇಜನಕ್ಕೆ ಹೊಸ ನೀತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:31 IST
Last Updated 21 ನವೆಂಬರ್ 2017, 6:31 IST

ಬೆಳಗಾವಿ: ತ್ರಿ ಡಿ, ರೋಬೊಟಿಕ್‌, ಕೃತಕ ಬುದ್ಧಿಮತ್ತೆ, ಆಕರ ಕೋಶ (ಸ್ಟೆಮ್ ಸೆಲ್‌), ಡಿಎನ್ಎ ಔಷಧ ಉತ್ಪಾದನೆಗೆ ಪೂರಕವಾದ ತಂತ್ರಜ್ಞಾನ ಉತ್ತೇಜಿಸಲು ಮತ್ತು ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಪ್ರೋತ್ಸಾಹಿಸುವ ಉದ್ದೇಶದ ಹೊಸ ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸೋಮವಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ವಿದ್ಯುನ್ಮಾನ ವಿನ್ಯಾಸ ಮತ್ತು ಉತ್ಪಾದನಾ ನೀತಿ 2017–22’ಕ್ಕೆ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಸಿವೆ.

ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯದ ಪಾಲು ಶೇ 35ರಷ್ಟಿದೆ. ಆದರೆ, ಹಾರ್ಡ್ ವೇರ್‌ ಕ್ಷೇತ್ರಕ್ಕೆ ಉತ್ತೇಜನ ನೀಡಲು ಈ ನೀತಿ ಅವಕಾಶ ಕಲ್ಪಿಸಲಿದೆ. ಶಿವಮೊಗ್ಗ, ಮಂಗಳೂರು, ಕಲಬುರ್ಗಿ, ಮೈಸೂರು, ಬೆಂಗಳೂರಿನಲ್ಲಿ  ಹಾರ್ಡ್‌ವೇರ್ ವೇಗೋತ್ಕರ್ಷಕ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಮೊದಲ ಹಂತದಲ್ಲಿ ₹ 80 ಕೋಟಿ ಸರ್ಕಾರ ನೀಡಲಿದೆ.

ADVERTISEMENT

ವಸತಿ ಶಾಲೆಗಳಿಗೆ ₹ 888 ಕೋಟಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲಾ ಸಂಕೀರ್ಣಗಳ ಒಟ್ಟು 53 ಕಟ್ಟಡಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಲ್ಪಿಸುವ ₹ 888.78 ಕೋಟಿ ವೆಚ್ಚದ ಯೋಜನೆಗೆ ಸಭೆ ಅನುಮೋದನೆ ನೀಡಿದೆ.

2017–18ನೇ ಸಾಲಿನಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ₹ 340.47 ಕೋಟಿ ವೆಚ್ಚದ ಔಷಧ ಮತ್ತು ಇತರ ವಸ್ತುಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ. ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಕೆಪಿಎಂಇ ಮಸೂದೆ ಮಂಡನೆ ಇಂದು?
ಮೂರನೇ ಬಾರಿ ಪರಿಷ್ಕರಣೆ ಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಮಂಗಳವಾರ ವಿಧಾ ನಮಂಡಲದಲ್ಲಿ ಮಂಡನೆಯಾಗುವ ಸಂಭವ ಇದೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ನೇಮಕಗೊಳ್ಳುವ ಸಾಧ್ಯತೆ ಇದೆ.

ಸುಭಾಷ್‌ ಚಂದ್ರ ಖುಂಟಿಆ ನಿವೃತ್ತರಾಗಲಿರುವ ಸ್ಥಾನಕ್ಕೆ ರತ್ನಪ್ರಭಾ, ಎಸ್.ಕೆ. ಪಟ್ಟನಾಯಕ್‌, ಲತಾ ಕೃಷ್ಣರಾವ್‌ ಹೆಸರುಗಳನ್ನು ಸಚಿವ ಸಂಪುಟ ಸಭೆಗೆ ಶಿಫಾರಸು ಮಾಡಲಾಗಿತ್ತು. ನೇಮಕ ಮಾಡುವ ವಿವೇಚನಾಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ಸಭೆ ನಿರ್ಧರಿಸಿತು. ಸೇವಾ ಹಿರಿತನದಲ್ಲಿ ಮೊದಲಿಗರಾಗಿರುವ ರತ್ನಪ್ರಭಾ ನೇಮಕಕ್ಕೆ ಹೆಚ್ಚಿನ ಸಚಿವರು ಒಲವು ತೋರಿಸಿದರು ಎಂದು ಮೂಲಗಳು ತಿಳಿಸಿವೆ.

ಕೆಪಿಎಂಇ ಮಸೂದೆ ಮಂಡನೆ ಇಂದು?
ಮೂರನೇ ಬಾರಿ ಪರಿಷ್ಕರಣೆಯಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ಮಂಗಳವಾರ ವಿಧಾನಮಂಡಲದಲ್ಲಿ ಮಂಡನೆಯಾಗುವ ಸಂಭವ ಇದೆ. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ತಾತ್ವಿಕ ಅನುಮೋದನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.