ADVERTISEMENT

ವಿದ್ಯುತ್ ಸಮಸ್ಯೆ ಸದ್ಯದಲ್ಲೇ ಅಂತ್ಯ

ಉಪ ಕೇಂದ್ರದ ಕಾಮಗಾರಿಗೆ ₹ 5 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 9:54 IST
Last Updated 15 ಜೂನ್ 2018, 9:54 IST

ಅಥಣಿ: ಅಥಣಿ ಬರಗಾಲ ಪೀಡಿತ ಪ್ರದೇಶವೆಂದರೂ ತಪ್ಪಿಲ್ಲ. ನೀರಿನ ಸಮಸ್ಯೆ ಜತೆಗೆ ವಿದ್ಯುತ್‌ ಸಮಸ್ಯೆಯನ್ನೂ ಎದುರಿಸುತ್ತಿರುವ ತಾಲ್ಲೂಕಿನಲ್ಲಿ ಬಿತ್ತಿದ ಬೆಳೆ ಒಣಗುವ ಪರಿಸ್ಥಿತಿಯಿದೆ. ಈ ಎಲ್ಲ ಸಮಸ್ಯೆಗೆ ಪರಿಹಾರವಾಗಿ ಶಿರೂರ ಗ್ರಾಮದಲ್ಲಿ 33 ಕೆವಿ ವಿದ್ಯುತ್‌ ಕಾಮಗಾರಿ ಕೊನೆಹಂತದಲ್ಲಿದೆ. ಈ ಉಪಕೇಂದ್ರ ಕಾರ್ಯಾರಂಭವಾಗುತ್ತಲೇ ಈ ಭಾಗದ 16 ಗ್ರಾಮಗಳಲ್ಲಿರುವ ವಿದ್ಯುತ್ ಸಮಸ್ಯೆ ಅಂತ್ಯವಾಗಲಿದೆ.

ಜಿಲ್ಲಾ ಪಂಚಾಯಿತಿಯ ಅನಂತಪುರ ಹಾಗೂ ಮದಬಾವಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮಲಾಬಾದ ಹಾಗೂ ಜಂಬಗಿ ಗ್ರಾಮಗಳಲ್ಲಿ 33 ಕೆವಿ ವಿದ್ಯುತ್ ಉಪ ಕೇಂದ್ರ ಇದ್ದು, 30 ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದೆ. ಈ ಭಾಗದಲ್ಲಿ ಸುಮಾರು 3 ರಿಂದ 4 ಸಾವಿರ ಪಂಪ್‌ಸೆಟ್‌ಗಳಿದ್ದು ನಿಗದಿತ ಅವಧಿಯಲ್ಲಿ ತ್ರೀ ಫೇಸ್‌ ವಿದ್ಯುತ್ ಸರಬರಾಜು ಆಗದೆ ರೈತರು ತೊಂದರೆಗೊಳಗಾಗುತ್ತಿದ್ದಾರೆ. ಪ್ರಸ್ತುತ ವಿದ್ಯುತ್‌ ಉಪ ಕೇಂದ್ರದ ಕಾಮಗಾರಿ ₹ 5 ಕೋಟಿ ಅನುದಾನದೊಂದಿಗೆ ಭರದಿಂದ ಸಾಗಿದೆ. ಈ ಕೇಂದ್ರದಿಂದ ಅರಳಿಹಟ್ಟಿ, ಸಂಬರಗಿ, ಖಿಳೇಗಾಂವ, ತಾಂವಶಿ ನಾಗನೂರ ಕಲೂತಿ ಮದಬಾವಿ ಜಕಾರಟ್ಟಿ ಸೇರಿದಂತೆ ಈ ಭಾಗದ ಗ್ರಾಮಕ್ಕೆ 24 ತಾಸು ವಿದ್ಯುತ್ ಸರಬರಾಜು ಆಗುತ್ತಿದ್ದು ಕಾಮಗಾರಿ ಮೂರು ತಿಂಗಳೊಳಗೆ ಪೂರ್ಣಗೊಂಡು ವಿದ್ಯುತ್ ಸರಬರಾಜು ಪ್ರಾರಂಭವಾಗುವ ನಿರೀಕ್ಷೆ ಹೆಸ್ಕಾಂ ಅಧಿಕಾರಿಗಳದ್ದು.

ಕಾಮಗಾರಿ ಗುಣಮಟ್ಟದಲ್ಲಿ ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಗಡಿ ಭಾಗದ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಭಾಗದಲ್ಲಿರುವ 33 ಕೆವಿ ಹಳೆ ಉಪ ಕೇಂದ್ರವನ್ನೂ ಮೇಲ್ದರ್ಜೆಗೇರಿಸುವ ಪ್ರಯತ್ನ ಮಾಡಲಾಗುವುದು. ವಿದ್ಯುತ್ ಸಮಸ್ಯೆ ಇದ್ದರೆ ನೇರವಾಗಿ ಸಂಪರ್ಕಿಸಬೇಕು ಎಂದು ಹೆಸ್ಕಾಂ ಅಧಿಕಾರಿ ಶೇಖರ ಬಹಿರೂಪಿ ತಿಳಿಸಿದರು.

ADVERTISEMENT

ವಿದ್ಯುತ್‌ ಉಪಕೇಂದ್ರದಿಂದ ಗಡಿ ಭಾಗದ ರೈತರ ಪಂಪಸೆಟ್‌ಗಳಿಗೆ ಸತತ ವಿದ್ಯುತ್ ಪೂರೈಕೆ ಆಗಲಿದ್ದು, ಸಮಸ್ಯೆಗೆ ಪರಿಹಾರ ದೊರಕಲಿದೆ
- ಶೇಖರ್ ಬಹಿರೂಪಿ, ಹೆಸ್ಕಾಂ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.