ಸಂಕೇಶ್ವರ: ಗಡಿ ಭಾಗದ ಪ್ರಮುಖ ಹೋಬಳಿ ಕೇಂದ್ರವಾದ ಸಂಕೇಶ್ವರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಸದಸ್ಯರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಪತ್ರವನ್ನು ಉಪ ತಹಶೀಲ್ದಾರರಿಗೆ ಶನಿವಾರ ನೀಡಿದರು.
ಸಂಕೇಶ್ವರ ಪಟ್ಟಣವು 50 ಸಾವಿರ ಜನಸಂಖ್ಯೆ ಹೊಂದಿದೆ. ಈ ಹೋಬಳಿ ವ್ಯಾಪ್ತಿಯಲ್ಲಿ 60 ಹಳ್ಳಿಗಳಿವೆ. 4 ಜಿಲ್ಲಾ ಪಂಚಾಯ್ತಿ ಹಾಗೂ 22 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಸಂಕೇಶ್ವರದಲ್ಲಿ ಉಪ–ಖಜಾನೆ ಕಚೇರಿ, ರೇಷ್ಮೆ ಇಲಾಖೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ, ಉಪ–ತಹಶೀಲ್ದಾರ್ ಕಚೇರಿ, 100 ಹಾಸಿಗೆಗಳ ಸಮುದಾಯ ಸರ್ಕಾರಿ ಆಸ್ಪತ್ರೆ, ಜೆ.ಎಂ.ಎಫ್.ಸಿ. ನ್ಯಾಯಾಲಯ, ಪೊಲೀಸ್ ಠಾಣೆ, ಸಾರಿಗೆ ಸಂಸ್ಥೆಯ ಘಟಕ, 4 ರಾಷ್ಟ್ರೀಕೃತ ಬ್ಯಾಂಕುಗಳು, 40 ಸಹಕಾರಿ ಸಂಘಗಳು, 10 ಶಿಕ್ಷಣ ಸಂಸ್ಥೆಗಳಿವೆ ಎಂದು ತಿಳಿಸಲಾಗಿದೆ.
ಇಲ್ಲಿಗೆ ಸಮೀಪದ ಕಣಗಲಾದಲ್ಲಿ ಕೇಂದ್ರ ಸರ್ಕಾರದ 2 ಉದ್ದಿಮೆಗಳು ಇವೆ. ಹೆಚ್ಚು ವೆಚ್ಚವಿಲ್ಲದೆ ಸಂಕೇಶ್ವರವನ್ನು ತಾಲ್ಲೂಕಾಗಿ ಮಾಡಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕನ್ನಡ ಸಂಘಟನೆಗಳ ಮುಖಂಡರಾದ ಕಿರಣ ನೇಸರಿ, ಮಹೇಶ ಹಟ್ಟಿಹೊಳಿ, ದಿಲೀಪ ಹೊಸಮನಿ, ನಬಿ ಹುಣಚಾಳಿ, ಪ್ರಮೋದ ಹೊಸಮನಿ, ರಾಜು ಮಾನೆ, ಕೀರ್ತಿ ಸಂಘ್ವಿ ಮತ್ತು ಇತರರು ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.