ADVERTISEMENT

ಸರ್ಕಾರಿ ಶಾಲೆಯಲ್ಲೊಂದು ಮಕ್ಕಳ ಸಂತೆ

ಸರ್ಕಾರಿ ಶಾಲೆಯಲ್ಲೊಂದು ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 6:23 IST
Last Updated 7 ಡಿಸೆಂಬರ್ 2017, 6:23 IST

ಚನ್ನಮ್ಮನ ಕಿತ್ತೂರು: ಹತ್ತು ಹಲವು ತರಕಾರಿ, ಹಣ್ಣು, ಆಗ ತಾನೆ ಕಡೆದಿಟ್ಟಿದ್ದ ಮಜ್ಜಿಗೆ, ಬಿಸಿ, ಬಿಸಿ ಭಜಿ, ವಗ್ಗರಣೆ ಹಚ್ಚಿದ ಚುರುಮರಿ, ಕರಕುಶಲ ವಸ್ತುಗಳು, ತಿಂಡಿ, ತಿನಿಸು ಮತ್ತು ಪುಸ್ತಕ ಮಳಿಗೆ...

ಇದೇನಿದು? ಬಜಾರ್‌ನಲ್ಲಿಟ್ಟಿರುವ ವಸ್ತುಗಳ ಪಟ್ಟಿ ಮಾಡುತ್ತಿದ್ದಾರೆ ಎನ್ನಬೇಡಿ. ಇಲ್ಲಿನ ಗುರುವಾರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೇರಿದ್ದ ‘ಮಕ್ಕಳ ಸಂತೆ’ಯಲ್ಲಿನ ನೋಟವಿದು. ಇದರಿಂದ ಶಾಲೆಯ ಅವರಣ ಸಂತೆ ರೂಪ ಪಡೆದುಕೊಂಡಿತ್ತು!

ಕಾಯಿಪಲ್ಲೆಗಳು, ಪ್ಯಾಕ್ ಮಾಡಿದ್ದ ತಿಂಡಿ ಪೊಟ್ಟಣ, ಹೈನುಗಾರಿಕೆ ಕುಟುಂಬಗಳ ಮನೆಯಿಂದ ಬಂದಿರುವ ಮಕ್ಕಳು ತಂದಿದ್ದ ಮಜ್ಜಿಗೆ, ಮಸಾಲಾ ಮಜ್ಜಿಗೆ, ಮೇದಾರ ಕುಟುಂಬದ ಮಕ್ಕಳು ತಂದಿದ್ದ ಕೇರುವ ಮರಗಳು, ಕರಕುಶಲ ವಸ್ತುಗಳು, ಮೂಗಿಗೆ ವಾಸನೆ ಬಡಿಯುತ್ತಿದ್ದ ಬಿಸಿ ಭಜಿ, ವಗ್ಗರಣೆ ಚುರಮರಿ... ತರಹೇವಾರಿ ಪದಾರ್ಥಗಳು ಅಲ್ಲಿದ್ದವು.

ADVERTISEMENT

ಅನೇಕ ವಸ್ತು ಮತ್ತು ಪದಾರ್ಥಗಳನ್ನು ಖರೀದಿಸಿದ ಶಿಕ್ಷಕರು ಮಕ್ಕಳಲ್ಲಿದ್ದ ವಹಿವಾಟು ಕೌಶಲ ಹಾಗೂ ಪೈಪೋಟಿಯಿಂದ ಮಾರಾಟ ಮಾಡುತ್ತಿದ್ದ ಚಾಕಚಕ್ಯತೆ ಕಂಡು ಅಧಿಕಾರಿಗಳು ಮತ್ತು ಶಿಕ್ಷಕರು ಬೆರಗಾದರು.

ಈ ‘ಶಾಲಾ ಬಜಾರ್‌’ಗೆ ಭೇಟಿ ನೀಡಿದ್ದ ಡಿಡಿಪಿಐ ಎ.ಬಿ. ಪುಂಡಲೀಕ, ಬಿಇಒ ಎ.ಬಿ. ಅಡಕಿ. ಬಿಆರ್‌ಸಿ ಹಾದಿಮನಿ ಮಸಾಲಾ ಮಜ್ಜಿಗೆ ರುಚಿಯನ್ನೂ ಸವಿದರು.

‘ಇಂಥ ಸಂತೆ ಮಕ್ಕಳಿಗೆ ವ್ಯವಹಾರಿಕ ಕೌಶಲ ಬೆಳೆಸಿಕೊಳ್ಳಲು ಸಹಕಾರಿ ಆಗುತ್ತದೆ. ಅಲ್ಲದೆ ಪಾಲಕರೂ ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಲು ಕಾರಣವಾಗುತ್ತದೆ’ ಎಂದು ಡಿಡಿಪಿಐ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕ ಎಂ.ಎಫ್‌.ಜಕಾತಿ, ‘ಮಕ್ಕಳ ಸಂತೆ ಪ್ರತಿ ವರ್ಷ ಏರ್ಪಡಿಸುತ್ತೇವೆ. ಆದರೆ ಈ ಬಾರಿ ಮಕ್ಕಳು ಹೆಚ್ಚಾಗಿ ಭಾಗವಹಿಸಿದ್ದಾರೆ. ಹೆಚ್ಚಿನ ವಸ್ತು ಮಾರುಕಟ್ಟೆಗೆ ತಂದಿರುವುದು ವಿಶೇಷ’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಕಲ್ಮಠ, ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಸಿ.ಎಂ. ಪಾಗಾದ, ರೊಟ್ಟಿ, ಕೆ.ವೈ. ಉಪರಿ, ಜಿ.ಎಸ್. ಬರಗಾಲಿ ಭಾಗವಹಿಸಿದ್ದರು.

--ಪ್ರದೀಪ ಮೇಲಿನಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.