ADVERTISEMENT

‘ತಿರುಕನ ಕನಸು ಕಾಣುವ ಎಂ.ಇ.ಎಸ್‌. ಶಾಸಕರು’

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 9:46 IST
Last Updated 2 ಆಗಸ್ಟ್ 2015, 9:46 IST

ಬೆಳಗಾವಿ: ‘ಸುವರ್ಣ ವಿಧಾನಸೌಧದ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಎಂ.ಇ.ಎಸ್. ಶಾಸಕ ಅರವಿಂದ ಪಾಟೀಲ ‘ತಿರುಕನ ಕನಸು’ ಕಾಣುತ್ತಿದ್ದಾರೆ. ಅರವಿಂದ ಪಾಟೀಲ ಅವರಂತಹ 100 ಜನ ಮತ್ತೆ ಹುಟ್ಟಿ ಬಂದರೂ ಬೆಳಗಾವಿಯ ಒಂದು ಇಂಚು ಜಾಗವೂ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಹೇಳಿದರು.

ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ತೆರಳಿ ಪರಿಹಾರ ವಿತರಿಸಲು ನಗರಕ್ಕೆ ಶನಿವಾರ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದು ಕರ್ನಾಟಕದಲ್ಲೇ ಉಳಿಯುತ್ತದೆ. ಜನರಿಂದ ಆಯ್ಕೆಯಾಗಿ ಬಂದ ಶಾಸಕರು ‘ತಿರುಕನ ಕನಸು’ ಕಾಣುವುದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.

‘ಅವರಿಂದ ಪಾಟೀಲ ಅವರಂತಹ ಹಲವರು ನೆಲ ಕಚ್ಚಿದ್ದಾರೆ. ಕೇಸರಿ ಪೇಟಾ ಧರಿಸುವುದು ಎಂ.ಇ.ಎಸ್‌.ನವರ ಸಂಸ್ಕೃತಿ ಎಂಬ ಕಾರಣಕ್ಕೆ ಇದುವರೆಗೆ ಸುಮ್ಮನಿದ್ದೆವು. ಮುಂದಿನ ಬಾರಿ ಕೇಸರಿ ಪೇಟ ಧರಿಸಿ ಸುವರ್ಣ ವಿಧಾನಸೌಧದ ಒಳಗೆ ಹೋಗಲು ಬಿಡುವುದಿಲ್ಲ’ ಎಂದು ಅವರು ತಿರುಗೇಟು ನೀಡಿದರು.

‘ಅರವಿಂದ ಪಾಟೀಲ, ಶಾಸಕ ಸಂಭಾಜಿ ಪಾಟೀಲ ಅವರು ಕಾಗದದ ಹುಲಿಗಳಿದ್ದಂತೆ. ಬೆಳಿಗ್ಗೆ ರೋಷ ತೋರಿಸಿ ಸಂಜೆಯಾಗುತ್ತಿದ್ದಂತೆ ಕ್ಷಮೆ ಕೋರುತ್ತಾರೆ’ ಎಂದು ಟೀಕಿಸಿದ ಅವರು, ‘ಎಂ.ಇ.ಎಸ್‌.ಅನ್ನು ನಾಡಿನಿಂದ ಬೇರು ಸಮೇತ ಕಿತ್ತು ಹಾಕುವ ಶಪಥವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಿದೆ. ಅದರಂತೆ ನಡೆಯುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.