ತೆಲಸಂಗ: ಇಲ್ಲಿಗೆ ಸಮೀಪದ ಹಾಲಳ್ಳಿ ಗ್ರಾಮದ ಶಿವಪ್ಪ ಬಸಪ್ಪ ತಳವಾರ ಎಂಬ 62 ವರ್ಷದ ರೈತ 12 ಗಂಟೆಯಲ್ಲಿ ಕಾಲ್ನಡಿಗೆ ಮೂಲಕ 105 ಕಿ.ಮಿ ಕ್ರಮಿಸಿ ವಿಜಯ ಸಾಧಿಸಿದ್ದಾರೆ.ಸೋಮವಾರ ಬೆಳಿಗ್ಗೆ ರೈತ ರೈತರು ಸೇರಿ ಮಾತಿಗಿಳಿದಾಗ, 12 ಗಂಟೆಯಲ್ಲಿ ವಿಜಯಪೂರಕ್ಕೆ ಹೋಗಿ ಮರಳಿ ಹಾಲಳ್ಳಿ ಗ್ರಾಮಕ್ಕೆ ಬರುವ ಬಗ್ಗೆ ಚರ್ಚೆ ಆಗಿದೆ. ಆ ಸ್ನೇಹಿತರಿಂದ ಸವಾಲು ಸ್ವೀಕರಿಸಿದ ಅವರು ಬೆಳಿಗ್ಗೆ 5 ಕ್ಕೆ ಕಾಲ್ನಡಿಗೆಯಲ್ಲಿ ಹಾಲಳ್ಳಿ ಗ್ರಾಮದಿಂದ ಹೊರಟು ವಿಜಯಪುರದ ಸಿದ್ಧೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಸಂಜೆ 5ಕ್ಕೆ ತೆಲಸಂಗ ಮೂಲಕ ಹಾಲಳ್ಳಿಗೆ ಮರಳಿ ಬಂದಿದ್ದಾರೆ.
ಉರಿ ಬಿಸಲನ್ನು ಲೆಕ್ಕಿಸದೆ, ಊಟ ಉಪಾಹಾರ ಮಾಡದೇ ಕೇವಲ ಚಹಾ ಕುಡಿದು ನಡೆಯುತ್ತಲೇ 105 ಕಿ.ಮಿ. ನಷ್ಟು ನಡೆದರೂ ಶಿವಪ್ಪನ ಉತ್ಸಾಹ ಕುಂದಿಲ್ಲ. 62 ರ ಈ ವಯಸ್ಸಿನಲ್ಲಿಯೂ ಹುರುಪಿನಿಂದ ಯುವಕರಿಗೆ ಮಾದರಿ ಯಾದ ಶಿವಪ್ಪನ ಸಾಹಸಕ್ಕೆ ಗ್ರಾಮಸ್ಥರು ಹುರುಪಿನಿಂದ ಗುಲಾಲು ಹಾಕಿ ಸ್ವಾಗತಿಸಿ ಗೌರವಿಸಿದರು. ಈ ಸಂಭ್ರಮದಲ್ಲಿ ಉಪ ತಹಶೀಲ್ದಾರ್ ಎಂ.ಎ. ಕಿತ್ತೂರ, ರೈತನ ಈ ಉತ್ಸಾಹ ಹಾಗೂ ಸ್ಪರ್ಧಾ ಮನೋಭಾವ ಎಲ್ಲರಿಗೂ ಹರ್ಷ ಮೂಡಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.