ಚಿಕ್ಕೋಡಿ: ‘ದೂಧ್ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 2017-18ರ ಹಂಗಾಮಿನಲ್ಲಿ ಪೂರೈಸಿದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ₹2900ರಂತೆ ನ.30ವರೆಗಿನ ಬಿಲ್ ಅನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದು ಕಾರ್ಖಾನೆ ಅಧ್ಯಕ್ಷ ಅಮಿತ್ ಪ್ರಭಾಕರ ಕೋರೆ ತಿಳಿಸಿದ್ದಾರೆ.
‘ಕಾರ್ಖಾನೆಯು 2017-18ನೇ ಹಂಗಾಮಿನಲ್ಲಿ ಇದುವರೆಗೆ 5,47,900 ಮೆಟ್ರಿಕ್ ಟನ್ ಕಬ್ಬು ನುರಿಸಿದೆ. ರೈತರು ತಮ್ಮ ಸಂಪೂರ್ಣ ಕಬ್ಬನ್ನು ತಮ್ಮದೇ ಆದ ಈ ಕಾರ್ಖಾನೆಗೆ ಪೂರೈಸಿ ಕಾರ್ಖಾನೆಯು ಹೊಂದಿರುವ 9 ಲಕ್ಷ ಕಬ್ಬು ನುರಿಸುವ ಗುರಿ ಸಾಧನೆಗೆ ಸಹಕಾರ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
‘ರೈತ ಸದಸ್ಯರಿಗೆ ಕಬ್ಬು ಕಟಾವು ಮಾಡಲು ಉದ್ಬವಿಸಿದ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಖಾನೆಯಿಂದ ರೈತ ಸದಸ್ಯರಿಗೆ ಆರ್ಥಿಕವಾಗಿ ಸಹಾಯಮಾಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಒಡಂಬಡಿಕೆ ಮಾಡಿಕೊಂಡು ಕಡಿಮೆ ಬಡ್ಡಿದರದಲ್ಲಿ ಕಬ್ಬು ಕಟಾವು ಮಾಡುವ ಯಂತ್ರಗಳನ್ನು ರೈತ ಸದಸ್ಯರು ಖರೀದಿಸಲು ಅನುಕೂಲ ಮಾಡಿಕೊಡಲಾಗಿದೆ’ ಎಂದು ತಿಳಿಸಿದ್ದಾರೆ.
‘28 ರೈತ ಸದಸ್ಯರಿಂದ ಕಬ್ಬು ಕಟಾವು ಯಂತ್ರಗಳ ಖರೀದಿಸುವ ಬೇಡಿಕೆ ಬಂದಿದೆ. ಈಗಾಗಲೇ 10 ಯಂತ್ರಗಳು ರೈತ ಸದಸ್ಯರ ಹೊಲದಲ್ಲಿ ಕಬ್ಬು ಕಟಾವು ಮಾಡುವ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಇನ್ನೂಳಿದ ಕಬ್ಬು ಕಟಾವು ಮಾಡುವ ಯಂತ್ರಗಳು ಶೀಘ್ರವಾಗಿ ಬರುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.