ADVERTISEMENT

ಏತ ನೀರಾವರಿ ಕಾಮಗಾರಿ ಆರಂಭಕ್ಕೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:17 IST
Last Updated 23 ಜನವರಿ 2018, 9:17 IST
ಬೈಲಹೊಂಗಲ ಸಮೀಪದ ಚಚಡಿ ಗ್ರಾಮದ ದೇಸಾಯಿವಾಡೆಯಲ್ಲಿ ನಡೆದ ಮುರಗೋಡ ಹೋಬಳಿ ಮಟ್ಟದ ಹಿಂಗಾರು ಕೃಷಿ ಅಭಿಯಾನ, ರೈತರ ಸಂವಾದ ಕಾರ್ಯಕ್ರಮವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು
ಬೈಲಹೊಂಗಲ ಸಮೀಪದ ಚಚಡಿ ಗ್ರಾಮದ ದೇಸಾಯಿವಾಡೆಯಲ್ಲಿ ನಡೆದ ಮುರಗೋಡ ಹೋಬಳಿ ಮಟ್ಟದ ಹಿಂಗಾರು ಕೃಷಿ ಅಭಿಯಾನ, ರೈತರ ಸಂವಾದ ಕಾರ್ಯಕ್ರಮವನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು   

ಬೈಲಹೊಂಗಲ: ‘ರೈತರ ಸಂಕಷ್ಟಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವುಗಳಿಗೆ ಸ್ಪಂದಿಸುವ ಉದ್ದೇಶದಿಂದ ಮುರಗೋಡ ಭಾಗದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಚಚಡಿ ಏತ ನೀರಾವರಿ ಕಾಮಗಾರಿ ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.

ಇಲ್ಲಿಗೆ ಸಮೀಪದ ಚಚಡಿ ಗ್ರಾಮದ ದೇಸಾಯಿವಾಡೆಯಲ್ಲಿ ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ, ಸರ್ದಾರ ವಿ.ಜಿ. ದೇಸಾಯಿ ಫೌಂಡೇಷನ್ ವತಿಯಿಂದ ನಡೆದ 2017-18ನೇ ಸಾಲಿನ ಮುರಗೋಡ ಹೊಬಳಿ ಮಟ್ಟದ ಹಿಂಗಾರು ಕೃಷಿ ಅಭಿಯಾನ ಹಾಗೂ ರೈತರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಜಾಗತಿಕ ಮಟ್ಟದಲ್ಲಿ ಯುವ ಜನಾಂಗ ಕೃಷಿಯತ್ತ ಒಲವು ತೋರದೆ, ಸರ್ಕಾರಿ ನೌಕರಿಗಾಗಿ ಅಲೆದಾಡುತ್ತಿರುವುದು ಕಳವಳಕಾರಿ ಸಂಗತಿ. ಅಸಮರ್ಪಕ ಮಳೆಯಿಂದ ರೈತರು ಬೇಸತ್ತಿದ್ದಾರೆ. ಬೆಳೆದ ಫಲಕ್ಕೆ ಬೆಲೆಯೂ ಇಲ್ಲದಾಗಿದೆ. ಆದ್ದರಿಂದ ರೈತರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಕೇಂದ್ರ ಸರ್ಕಾರ ಕೃಷಿ ಅಭಿವೃದ್ದಿಗಾಗಿ ಫಸಲ್‌ ಭೀಮಾ ಯೋಜನೆ ಜಾರಿಗೆ ತಂದಿದೆ’ ಎಂದರು.

ADVERTISEMENT

ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ದನಗೌಡರ, ‘ನಮ್ಮನ್ನಾಳುವ ಸರ್ಕಾರಗಳು ರೈತರ ಬಗ್ಗೆ ನಿಷ್ಕಾಳಜಿ ಹೊಂದಿವೆ’ ಎಂದು ಕಳವಳ ವ್ಯಕ್ತಪಡಿಸಿದರು. ಹುನಗುಂದ ಪ್ರಗತಿಪರ ರೈತ ಡಾ.ಮಲ್ಲಣ್ಣ ನಾಗರಾಳ ಮಾತನಾಡಿದರು. ಕಟಕೋಳ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವೀರಯ್ಯಸ್ವಾಮಿ ಹುಲಗೇರಿ, ಬಗಳಂಭಾದೇವಿ ಆರಾಧಕ ವೀರಯ್ಯಸ್ವಾಮಿ ಹಿರೇಮಠ, ಸರ್ದಾರ ವಿ.ಜಿ. ದೇಸಾಯಿ ಪೌಂಡೇಶನ್ ಅಧ್ಯಕ್ಷ ನಾಗರಾಜ ದೇಸಾಯಿ, ಪಶು ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರಯ್ಯ, ತೊಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ, ರೇಷ್ಮೆ ಇಲಾಖೆಯ ಹಿರೇಮಠ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಬಂಡಿವಡ್ಡರ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಸುರೇಶ ಮ್ಯಾಕಲ್ ಇದ್ದರು.

ಕಾರ್ಯಕ್ರಮದಲ್ಲಿ 20 ಪ್ರಗತಿಪರ ರೈತರನ್ನು ಸತ್ಕರಿಸಲಾಯಿತು. ಕೃಷಿ ಅಧಿಕಾರಿ ಕೆ.ಎನ್. ಮಾರಡ್ಡಿ ಸ್ವಾಗತಿಸಿದರು. ವಿ.ಎಂ. ಹೊಸೂರ ನಿರೂಪಿಸಿದರು. ಕೃಷಿ ಸಹಾಯಕ ಸಾಲಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.