ADVERTISEMENT

ಅಗ್ರ 10 ರ‍್ಯಾಂಕ್‌ಗಳಲ್ಲಿ 9 ಬೆಂಗಳೂರಿನ ಪಾಲು

​ಪ್ರಜಾವಾಣಿ ವಾರ್ತೆ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಅಗ್ರ 10 ರ‍್ಯಾಂಕ್‌ಗಳಲ್ಲಿ 9 ಬೆಂಗಳೂರಿನ ಪಾಲು
ಅಗ್ರ 10 ರ‍್ಯಾಂಕ್‌ಗಳಲ್ಲಿ 9 ಬೆಂಗಳೂರಿನ ಪಾಲು   
ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ಕಾಮೆಡ್-ಕೆ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಮೊದಲ 10 ರ‍್ಯಾಂಕ್‌ ಪಡೆದವರಲ್ಲಿ 9 ವಿದ್ಯಾರ್ಥಿಗಳು ನಗರದವರಾಗಿದ್ದಾರೆ.
 
ಮೊದಲ ರ‍್ಯಾಂಕ್‌ ಪಡೆದ ನಗರದ ದೆಹಲಿ ಪಬ್ಲಿಕ್‌ ಶಾಲೆಯ ಮಾಯಾಂಕ್ ಬರನ್ವಾಲ್, ‘ಶಾಲೆ ಮುಗಿದ ನಂತರ ನಿತ್ಯ 4ರಿಂದ 5ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರಿಂದ ಕಾಮೆಡ್‌-ಕೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಲು ಸಹಾಯವಾಯಿತು’ ಎಂದರು. 
 
‘ಫಲಿತಾಂಶ ಬಂದಾಗ ಮೊದಲು ನನ್ನ ಓದಿಗೆ ಬೆಂಬಲವಾಗಿ ನಿಂತ ಅಪ್ಪ–ಅಮ್ಮನಿಗೆ ಧನ್ಯವಾದ ತಿಳಿಸಿದೆ. ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರ್‌ ಆಗಬೇಕೆ
ನ್ನುವ ಆಸೆ ಇದೆ. ಬಾಂಬೆ ಅಥವಾ ಮದ್ರಾಸ್‌ ಐಐಟಿಯಲ್ಲಿ ವ್ಯಾಸಂಗ ನಡೆಸುವುದು ನನ್ನ ಹೆಬ್ಬಯಕೆ. ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಬೇಕೆಂದಿದ್ದೇನೆ’ ಎಂದು ಅವರು ಕನಸುಗಳನ್ನು ಹಂಚಿಕೊಂಡರು
 
ಮೂರನೇ ರ‍್ಯಾಂಕ್‌ ಪಡೆದ ಶ್ರೀ ಕುಮಾರನ್ಸ್‌ ಶಾಲೆಯ ರುದ್ರಪಟ್ಟಣ ವಲ್ಲಭ್ ರಮಾಕಾಂತ್‌, ‘ದ್ವಿತೀಯ ಪಿಯು ಸಿಬಿಎಸ್‌ಇ ಫಲಿತಾಂಶ ಇನ್ನೂ ಬರಬೇಕಿದೆ. ಆದರೆ, ಕಾಮೆಡ್‌–ಕೆ ಪರೀಕ್ಷೆಯಲ್ಲಿ ಉತ್ತಮ ರ್‌್ಯಾಂಕಿಂಗ್‌ ಬಂದಿರುವುದು ನನ್ನ ಪೋಷಕರಿಗೆ ಖುಷಿ ನೀಡಿದೆ.
 
ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಷನ್ಸ್ ಅಥವಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡುವ ಹಂಬಲ ನನ್ನದು’ ಎಂದು ತಿಳಿಸಿದರು.
ದೀಕ್ಷಾ ಶಿಕ್ಷಣ ಸಂಸ್ಥೆಯ ಸಿ.ವಿ. ಸಿದ್ಧಾರ್ಥ 180 ಅಂಕಗಳಿಗೆ 163 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ರ್‌್ಯಾಂಕ್‌ ಗಳಿಸಿದ್ದಾರೆ.
 
‘ ತಾಸುಗಟ್ಟಲೆ ಓದಿದ ನಂತರವೂ ಒತ್ತಡಕ್ಕೆ ಒಳಗಾಗದಂತೆ ಇರಲು ಕ್ರೀಡೆ ಸಹಾಯ ಮಾಡಿತು. ಬ್ಯಾಸ್ಕೆಟ್‌ ಬಾಲ್‌ ಮತ್ತು ಫುಟ್‌ಬಾಲ್‌ ನನ್ನ ನೆಚ್ಚಿನ ಕ್ರೀಡೆಗಳು. ದ್ವಿತೀಯ ಪಿಯುಸಿಯಲ್ಲಿ 576 ಅಂಕಗಳನ್ನು ಗಳಿಸಿದ್ದೇನೆ.  ಐಐಟಿಯಲ್ಲಿ  ಪದವಿ ಪಡೆಯುವ  ಕನಸಿದೆ’ ಎಂದರು.
 
ಐದನೇ ರ‍್ಯಾಂಕ್‌ಗಳಿಸಿದ ಎನ್‌. ಸಹನಾ, ‘ದ್ವಿತೀಯ ಪಿಯುಸಿಯಲ್ಲಿ 594 ಅಂಕಗಳನ್ನು ಗಳಿಸಿದ್ದೆ. ಕಾಮೆಡ್‌–ಕೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆಯುವ ಭರವಸೆ ಇತ್ತು. ಶ್ರದ್ಧೆಯಿಂದ ಓದಿದರೆ ಯಶಸ್ಸು ಸಾಧ್ಯ’ ಎಂದು ಯಶಸ್ಸಿನ ಗುಟ್ಟು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.