ADVERTISEMENT

ಅಧ್ಯಕ್ಷರಿಂದ 25 ಮನೆಗಳ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2015, 19:54 IST
Last Updated 13 ಅಕ್ಟೋಬರ್ 2015, 19:54 IST

ಬೆಂಗಳೂರು: ಜಲಮಂಡಳಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸಲು ಹಾಗೂ ನೀರಿನ ಸಂಪರ್ಕದಲ್ಲಿ ಪಾರದರ್ಶಕತೆ ತರಲು ಕುಡಿಯುವ ನೀರಿನ ಸಂಪರ್ಕಗಳ ಸಮೀಕ್ಷೆಗೆ ಮಂಗಳವಾರ ಚಾಲನೆ ನೀಡಲಾಯಿತು. ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ಅವರೇ 25 ಮನೆಗಳ ಸಮೀಕ್ಷೆ ನಡೆಸಿದರು.

ನೀರಿನ ಸಂಪರ್ಕಗಳ ಜಿಐಎಸ್‌ ಮ್ಯಾಪಿಂಗ್‌ ಮಾಡಲು ಮಂಡಳಿ ತೀರ್ಮಾನಿಸಿದೆ. ಆರಂಭಿಕವಾಗಿ ಸಮೀಕ್ಷಾ ಕಾರ್ಯಕ್ಕೆ ದಕ್ಷಿಣ–2 ಉಪವಿಭಾಗದ ಕೊತ್ತನೂರು ದಿಣ್ಣೆ ಸೇವಾ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದೆ. ಬೆಳಿಗ್ಗೆ 7.30ಕ್ಕೆ ಸಮೀಕ್ಷೆಗೆ ಚಾಲನೆ ನೀಡಲಾಯಿತು. ಬುಧವಾರವೂ ಸಮೀಕ್ಷೆ ನಡೆಯಲಿದೆ. ಹಿರಿಯ ಅಧಿಕಾರಿಗಳೂ ಸೇರಿ ಎಲ್ಲ ಅಧಿಕಾರಿಗಳಿಗೆ ನಿರ್ದಿಷ್ಟ ಮನೆಗಳ ಸಮೀಕ್ಷೆ ಜವಾಬ್ದಾರಿ ವಹಿಸಲಾಗಿದೆ.

ಅನಧಿಕೃತ ಸಂಪರ್ಕ ಪಡೆದಿದ್ದ ಕೆಲವು ವಸತಿ ಸಂಕೀರ್ಣಗಳಿಗೆ ಹಾಗೂ ಕಟ್ಟಡಗಳಿಗೆ ಶೋಕಾಸ್‌ ನೋಟಿಸ್‌ ನೀಡಲು ವಿಜಯಭಾಸ್ಕರ್ ನಿರ್ದೇಶನ ನೀಡಿದರು. ಕಾಲಮಿತಿಯಲ್ಲಿ ಅಧಿಕೃತ ಸಂಪರ್ಕ ಪಡೆಯದೆ ಇದ್ದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು  ನಿವಾಸಿಗಳಿಗೆ ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಅನಧಿಕೃತ ಸಂಪರ್ಕಗಳು ಪತ್ತೆಯಾದರೆ, ಕೊಳವೆ ಬಾವಿ ದಾಖಲಿಸದೆ ಇರುವುದು, ರೀಡಿಂಗ್‌ ಸರಿಯಾಗಿ ಮಾಡದೆ ಇರುವ ಪ್ರಕರಣಗಳು ಬೆಳಕಿಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ಮೀಟರ್‌ ರೀಡಿಂಗ್‌ ವ್ಯತ್ಯಾಸ: ಪ್ರತಿ ತಿಂಗಳೂ ಮಂಡಳಿಯ ಸಿಬ್ಬಂದಿ ನಿರ್ದಿಷ್ಟ ದಿನದಂದು ಮೀಟರ್‌ ರೀಡಿಂಗ್‌ ಮಾಡಲು ಬರುವರು. ಆ ಸಂದರ್ಭದಲ್ಲಿ ಸಾರ್ವಜನಿಕರು ರೀಡಿಂಗ್ ಪಡೆಯಲು ಅನುವು ಮಾಡಿಕೊಡಬೇಕು. ಗ್ರಾಹಕರೂ ಖುದ್ದಾಗಿ ಮೀಟರ್‌ ರೀಡಿಂಗ್ ಮಾಡಬೇಕು. ವ್ಯತ್ಯಾಸ ಕಂಡು ಬಂದರೆ ಸಹಾಯಕ ಎಂಜಿನಿಯರ್‌ ಅಥವಾ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಎಸ್‌ಎಂಎಸ್‌ ಮಾಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.