ಬೆಂಗಳೂರು: ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ ಹೊಂದಿರುವ 600 ಕುಟುಂಬಗಳ ವಿರುದ್ಧ ಈವರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಐದು ಹಂತದ ಯೋಜನೆಗಳ ಮೂಲಕ ನಗರಕ್ಕೆ ನಿತ್ಯ 135 ಕೋಟಿ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ಈ ಹಿಂದೆ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 49ರಷ್ಟು ಇತ್ತು. ಹೀಗಾಗಿ ಅದನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಮಂಡಳಿಯು ದಕ್ಷಿಣ, ಪಶ್ಚಿಮ ಹಾಗೂ ಕೇಂದ್ರ ವಲಯಗಳಲ್ಲಿ ₹576 ಕೋಟಿ ವೆಚ್ಚದಲ್ಲಿ ‘ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆ’ ಕೈಗೆತ್ತಿಕೊಂಡಿತ್ತು. ಈ ವೇಳೆ ಕೇಂದ್ರದಲ್ಲಿ 2,580, ದಕ್ಷಿಣದಲ್ಲಿ 1,940 ಹಾಗೂ ಪಶ್ಚಿಮ ವಲಯದಲ್ಲಿ 1,737 ಅನಧಿಕೃತ ಸಂಪರ್ಕಗಳು ಪತ್ತೆಯಾಗಿದ್ದವು. ದಂಡ ಕಟ್ಟಿಸಿಕೊಂಡು ದಕ್ಷಿಣ ಹಾಗೂ ಪಶ್ಚಿಮ ವಲಯದ 1,447 ಸಂಪರ್ಕಗಳನ್ನು ಸಕ್ರಮಗೊಳಿಸಲಾಗಿದೆ.
‘ನಗರದ ಹೃದಯ ಭಾಗಗಳಿಗೆ (ಕೋರ್ ಪ್ರದೇಶ) 1964ರಿಂದಲೇ ಕಾವೇರಿ ನೀರು ಪೂರೈಕೆ ಆಗುತ್ತಿದೆ. ಅಕ್ರಮ ಸಂಪರ್ಕಗಳ ಸಕ್ರಮಗೊಳಿಸುವ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಕೆಲವು ಸಂದರ್ಭಗಳಲ್ಲಿ ಮನೆ ಮಾಲೀಕರ ಅಸಹಕಾರದಿಂದ ಸಂಪರ್ಕಗಳನ್ನು ಸಕ್ರಮಗೊಳಿಸುವುದು ಕಷ್ಟದ ಕೆಲಸ ಆಗುತ್ತದೆ. ಸ್ಥಳೀಯ ಮುಖಂಡರ ಮೂಲಕ ಒತ್ತಡ ಹೇರುತ್ತಾರೆ. ಇದು ದೊಡ್ಡ ಸಮಸ್ಯೆ’ ಎಂದು ಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದರು.
‘ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳಿಗೆ 2012ರಿಂದ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿನ ಹೆಚ್ಚಿನ ಗ್ರಾಹಕರು ಕಳೆದ ಐದು ವರ್ಷಗಳಿಂದ ಪುಕ್ಕಟೆ ನೀರು ಪಡೆಯುತ್ತಿದ್ದಾರೆ. ಇಲ್ಲಿನ ನಿವಾಸಿಗಳು ನೀರಿನ ಸಂಪರ್ಕ ಸಕ್ರಮ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಇಲ್ಲಿ ನಿರಂತರ ಕಾರ್ಯಾಚರಣೆನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.
‘ಮೂರು ವಲಯಗಳಲ್ಲಿ ಲೆಕ್ಕಕ್ಕೆ ಸಿಗದ ನೀರನ್ನು ಶೇ16ಕ್ಕೆ ಇಳಿಸುವ ಗುರಿ ಇಟ್ಟುಕೊಂಡಿದ್ದೆವು. ದಕ್ಷಿಣದಲ್ಲಿ ಶೇ 27.90ಕ್ಕೆ, ಪಶ್ಚಿಮದಲ್ಲಿ ಶೇ 29.19 ಹಾಗೂ ಕೇಂದ್ರ ವಲಯದಲ್ಲಿಶೇ 32.84ಕ್ಕೆ ಇಳಿಸಲಾಗಿದೆ. ಈಗನಿತ್ಯ 12 ಕೋಟಿ ಲೀಟರ್ ನೀರು ಉಳಿತಾಯ ಆಗುತ್ತಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.