ಬೆಂಗಳೂರು: ನೈಸ್ ರಸ್ತೆಯ ದೇವೇಗೌಡ ವೃತ್ತದ ಬಳಿ ಶನಿವಾರ ಮಧ್ಯಾಹ್ನ ವಾಹನ ಡಿಕ್ಕಿ ಹೊಡೆದು ಬ್ಯಾಟರಾಯನಪುರ ಸಂಚಾರ ಠಾಣೆಯ ಕಾನ್ಸ್ಟೆಬಲ್ ರವಿಶಂಕರ್ (28) ಮೃತಪಟ್ಟಿದ್ದಾರೆ.
ರವಿಶಂಕರ್ ಹಾಗೂ ಗೃಹರಕ್ಷಕ ವೆಂಕೋಬಾ ರಾವ್ ಅವರನ್ನು ದೇವೇಗೌಡ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ರವಿಶಂಕರ್ ಮೂತ್ರವಿಸರ್ಜನೆಗೆಂದು ವೃತ್ತದಿಂದ ಸ್ವಲ್ಪ ದೂರಕ್ಕೆ ಬಂದಿದ್ದರು. ಈ ವೇಳೆ ವಾಹನ ಗುದ್ದಿ ಹೋಗಿದೆ.
ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆ ಬದಿ ಪೊಲೀಸ್ ಸಿಬ್ಬಂದಿಯ ದೇಹ ಬಿದ್ದಿರುವುದನ್ನು ಕಂಡ ಶಾಲಾ ವಾಹನದ ಚಾಲಕರೊಬ್ಬರು, ವೃತ್ತದಲ್ಲಿದ್ದ ವೆಂಕೋಬಾ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಓಡಿದ ಅವರು, ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.
ನೆಲಮಂಗಲ ಬಳಿಯ ಸೊಂಡೆಕೊಪ್ಪ ಗ್ರಾಮದ ರವಿಶಂಕರ್, 2012ರಲ್ಲಿ ಇಲಾಖೆ ಸೇರಿಕೊಂಡಿದ್ದರು. ಅಂದಿನಿಂದಲೂ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳೀಯರನ್ನು ವಿಚಾರಣೆ ನಡೆಸಿ ಗುದ್ದಿದ ವಾಹನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.