ಬೆಂಗಳೂರು: ಪಾನಮತ್ತ ಚಾಲನೆ ಯಿಂದ ಸಂಭವಿಸಿದ ಅಪಘಾತದಲ್ಲಿ ನಾಲ್ಕು ಕಾರುಗಳು ಜಖಂಗೊಂಡು, ರಘುಪತಿ ಎಂಬುವರು ಗಾಯಗೊಂಡ ಘಟನೆ ಜಯನಗರದ 41ನೇ ಅಡ್ಡರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಚಾಲಕ ಸುಧಾಕರ್ ಎಂಬಾತನನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಾತ್ರಿ ಜೆ.ಪಿ. ನಗರದ ಸ್ನೇಹಿತನ ಮನೆಗೆ ಹೋಗಿದ್ದ ಸುಧಾಕರ್, ಪಾನಮತ್ತನಾಗಿ ಅಲ್ಲಿಂದ ಇಬ್ಬರು ಗೆಳೆಯರ ಜತೆ 12.30ರ ಸುಮಾರಿಗೆ ಜಯನಗರ ಕಡೆಗೆ ಬರುತ್ತಿದ್ದ.
ಇದೇ ವೇಳೆ ರಘುಪತಿ ಸಹ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದಿರುವ ಸುಧಾಕರ್, ನಿಯಂತ್ರಣ ಕಳೆದುಕೊಂಡು ರಘುಪತಿ ಅವರ ಕಾರಿಗೆ ಡಿಕ್ಕಿ ಮಾಡಿದ್ದಾನೆ. ಗುದ್ದಿದ ರಭಸಕ್ಕೆ ಆ ಕಾರು ಮಗುಚಿ, ರಸ್ತೆ ಬದಿ ನಿಂತಿದ್ದ ಇನ್ನೊಂದು ಕಾರಿನ ಮೇಲೆ ಬಿದ್ದಿತು ಎಂದು ಪೊಲೀಸರು ಹೇಳಿದರು.
ಆರೋಪಿಯ ಕಾರು ಸಹ ಅಡ್ಡಾದಿಡ್ಡಿಯಾಗಿ ಸಾಗಿ, ಮತ್ತೊಂದು ಕಾರಿಗೆ ಗುದ್ದಿದೆ. ಸ್ಥಳದಲ್ಲಿ ಜನ ಜಮಾಯಿಸುತ್ತಿದ್ದಂತೆಯೇ ಸುಧಾಕರ್ನ ಸ್ನೇಹಿತರು, ಓಡಿ ಹೋಗಿದ್ದಾರೆ. ಪರಾರಿಯಾಗಲು ಯತ್ನಿಸಿದ ಈತನನ್ನು ಜನ ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ರಘುಪತಿ ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ.
ಮೀಟರ್ಗೇ ಸವಾಲು!
‘ನಮ್ಮ ಬಳಿ ಇರುವ ಆಲ್ಕೋಮೀಟರ್, ಗರಿಷ್ಠ 550 ಮಿ. ಗ್ರಾಂವರೆಗೆ ಮದ್ಯದ ಪ್ರಮಾಣ ಅಳೆಯುತ್ತದೆ. ತಪಾಸಣೆ ವೇಳೆ ಚಾಲಕನ ಮದ್ಯ ಸೇವನೆ ಪ್ರಮಾಣ ಅದಕ್ಕಿಂತ ಹೆಚ್ಚಿತ್ತು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.