ADVERTISEMENT

ಅಸ್ವಸ್ಥ ಕಾರ್ಮಿಕ ಸಾವು

ಗೊರಗುಂಟೆಪಾಳ್ಯದಲ್ಲಿ ಮ್ಯಾನ್‌ಹೋಲ್‌ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:30 IST
Last Updated 20 ಅಕ್ಟೋಬರ್ 2016, 19:30 IST

ಬೆಂಗಳೂರು: ಗೊರಗುಂಟೆಪಾಳ್ಯದಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದ ಕಾರ್ಮಿಕ ಮಂಜುನಾಥ್ (30) ಗುರುವಾರ  ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಎರಡಕ್ಕೇರಿದೆ.

‘ಮೈಸೂರು ಮೂಲದ ಮಂಜುನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.   ಅಂದು ಮ್ಯಾನ್‌ಹೋಲ್‌ಗೆ ಇಳಿದಿದ್ದ ಇನ್ನೊಬ್ಬ ಕಾರ್ಮಿಕ ತುಮಕೂರು ಮೂಲದ ವೆಂಕಟೇಶ್ (24) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು  ಯಶವಂತಪುರ ಪೊಲೀಸರು ತಿಳಿಸಿದರು.

‘ಆರ್‌ಎನ್‌ಎಸ್ ಶಾಂತಿನಿವಾಸ ಅಪಾರ್ಟ್‌ಮೆಂಟ್‌ನ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಲು ಎಲ್‌ಎನ್‌ವಿ ಏಜೆನ್ಸಿ ಪರವಾಗಿ ವೆಂಕಟೇಶ್‌ ಹಾಗೂ ಮಂಜುನಾಥ್‌ ಬಂದಿದ್ದರು.  ಆರಂಭದಲ್ಲಿ ಒಳಗೆ ಇಳಿದಿದ್ದ ವೆಂಕಟೇಶ್‌, ಉಸಿರಾಡಲಾಗದೆ ಸಹಾಯಕ್ಕೆ ಚೀರಾಡತೊಡಗಿದ್ದರು. ಆಗ ಮಂಜುನಾಥ್‌, ರಕ್ಷಣೆಗಾಗಿ ಮ್ಯಾನ್‌ಹೋಲ್‌ಗೆ ಇಳಿದಿದ್ದರು’

ADVERTISEMENT

‘ಬಳಿಕ ಅವರಿಬ್ಬರೂ ಮ್ಯಾನ್‌ಹೋಲ್‌ನಲ್ಲಿ ಸಿಲುಕಿ, ಸಹಾಯಕ್ಕಾಗಿ ಕೂಗಾಡಲಾರಂಭಿಸಿದ್ದರು. ಸ್ಥಳೀಯರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ವೆಂಕಟೇಶ್‌ ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಮಂಜುನಾಥ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು’ ಎಂದು ಹೇಳಿದರು.

‘ಘಟನೆ ಸಂಬಂಧ ಗುತ್ತಿಗೆದಾರ ಮೋಹನ್‌ ಕೃಷ್ಣ  ಎಂಬುವರ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಅವರು ತಲೆಮರೆಸಿಕೊಂಡಿದ್ದು, ಪತ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.