ಬೆಂಗಳೂರು: ‘ಬಡಸಮುದಾಯದ ಆಟೊ ರಿಕ್ಷಾ ಚಾಲಕರು ಮತ್ತು ತರಕಾರಿ ಮಾರಾಟಗಾರರಿಗೆ ಮನೆ ಹಾಗೂ ನಿವೇಶನಗಳನ್ನು ನೀಡಲು ಸರ್ಕಾರ ಚಿಂತಿಸಿದೆ’ ಎಂದು ವಸತಿ ಇಲಾಖೆ ಸಚಿವ ಎಂ.ಕೃಷ್ಣಪ್ಪ ಅವರು ಹೇಳಿದರು.
ನಗರದ ಬಾಪೂಜಿನಗರ ವಾರ್ಡ್ನಲ್ಲಿ ಬೆಂಗಳೂರು ಒನ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ರಿಕ್ಷಾ ಚಾಲಕರು ಮತ್ತು ಬೀದಿಗಳಲ್ಲಿ ತರಕಾರಿ ಮಾರಾಟ ಮಾಡುವವರಿಗೆ ನಿವೇಶನ ಮತ್ತು ಮನೆಗಳನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದೇನೆ. ಅದರಂತೆ ಅವರು ಈ ಬಾರಿಯ ಬಜೆಟ್ನಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.
‘ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಡಾಂಬರೀಕರಣ ಆಗದ ರಸ್ತೆಗಳನ್ನು ಕೂಡಲೇ ಅಭಿವೃದ್ಧಿಗೊಳಿಸಲಾಗುವುದು’ ಎಂದರು. ಮೇಯರ್ ಜಿ.ಪದ್ಮಾವತಿ ಮಾತನಾಡಿ, ‘ಬೆಂಗಳೂರು ಒನ್ ಕೇಂದ್ರ ಪ್ರಾರಂಭವಾಗಿರುವುದು ಈ ಭಾಗದ ಜನರಿಗೆ ಸಹಕಾರಿಯಾಗಿದೆ’ ಎಂದು ಹೇಳಿದರು.
ಬಾಪೂಜಿನಗರ ವಾರ್ಡ್ ಸದಸ್ಯ ಅಜ್ಮಲ್ ಬೇಗ್ ಮಾತನಾಡಿ, ‘ಬೆಂಗಳೂರು ಒನ್ ಕೇಂದ್ರದಲ್ಲಿ 112 ಸೇವೆಗಳನ್ನು ನಾಗರಿಕರು ಬಳಸಿಕೊಳ್ಳಬಹುದು. ಕೃಷ್ಣಪ್ಪ ಅವರು ನಮ್ಮ ವಾರ್ಡ್ಗೆ ₹ 30 ಕೋಟಿ ಅನುದಾನ ಕೊಡಿಸಿದ್ದಾರೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.