ಬೆಂಗಳೂರು: ‘ವಸತಿ ಪ್ರದೇಶದಲ್ಲಿರುವ ಅನಧಿಕೃತ ಪಬ್, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಂದಿರಾನಗರದ ನಿವಾಸಿಗಳು ನೂರಡಿ ರಸ್ತೆಯಲ್ಲಿ ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.
‘ಇಂದಿರಾನಗರದಲ್ಲಿ ವಾಣಿಜ್ಯ ಸಂಕೀರ್ಣಗಳು, ಪಬ್, ರೆಸ್ಟೋರೆಂಟ್, ಹೋಟೆಲ್ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವಂತಿಲ್ಲ. ಆದರೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಸಿಇಒ ಶ್ರೀಧರ್ ಪಬ್ಬಿಶೆಟ್ಟಿ ದೂರಿದರು.
‘ವಾಣಿಜ್ಯ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದರಿಂದ ಜನಸಂದಣಿ ಹೆಚ್ಚಾಗಿದೆ. ಇದರಿಂದ ಈ ಭಾಗದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ’ ಎಂದರು.
ಸ್ಥಳೀಯ ನಿವಾಸಿ ವಿನೂ ತಿಮ್ಮಯ್ಯ ಮಾತನಾಡಿ, ‘ಪಬ್ಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವುದರಿಂದ ಅಬ್ಬರ ಸಂಗೀತ ಕೇಳಿಬರುತ್ತದೆ. ಇದರಿಂದ ನಿವಾಸಿಗಳು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.
‘ಕೆಲವರು ಪಬ್ಗಳಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಾರೆ. ಕೆಲ ಯುವಕರು ನೂರಡಿ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಾರೆ. ಇದರಿಂದ ನಿವಾಸಿಗಳು ತೊಂದರೆ ಉಂಟಾಗುತ್ತಿದೆ’ ಎಂದರು.