ADVERTISEMENT

ಇಗ್ನೊ: ಸಾಮಾಜಿಕ ಮಾಧ್ಯಮ ಘಟಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:34 IST
Last Updated 19 ನವೆಂಬರ್ 2017, 19:34 IST
ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಜೆ.ಸ್ವರ್ಣಕುಮಾರಿ, ವಿಷ್ಣುಕಾಂತ್ ಎಸ್. ಚಟಪಲ್ಲಿ, ಜಿ.ಎಚ್.ಇಮ್ರಾಪುರ ಅವರು ಪುಷ್ಪನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ
ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಜೆ.ಸ್ವರ್ಣಕುಮಾರಿ, ವಿಷ್ಣುಕಾಂತ್ ಎಸ್. ಚಟಪಲ್ಲಿ, ಜಿ.ಎಚ್.ಇಮ್ರಾಪುರ ಅವರು ಪುಷ್ಪನಮನ ಸಲ್ಲಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) 32ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಗರದ ಇಗ್ನೊ ಪ್ರಾದೇಶಿಕ ಕೇಂದ್ರದಲ್ಲಿ ಸಾಮಾಜಿಕ ಮಾಧ್ಯಮ ಘಟಕವನ್ನು ಭಾನುವಾರ ಉದ್ಘಾಟಿಸಲಾಯಿತು.

ಘಟಕ ಉದ್ಘಾಟಿಸಿದ ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್ತಿನ ಸಲಹೆಗಾರ ಪ್ರೊ.ವಿಷ್ಣುಕಾಂತ್ ಎಸ್. ಚಟಪಲ್ಲಿ, ‘ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಓದಿನ ಹಂಬಲವನ್ನು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ನೀಗಿಸುತ್ತಿದೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ’ ಎಂದರು.

ದೇಶದಲ್ಲಿರುವ ಶೇ 90 ರಷ್ಟು ಕಾರ್ಮಿಕರು ಅಸಂಘಟಿತರು. ಅವರ ಕೌಶಲ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಕೈಜೋಡಿಸಿದರೆ, ಕಾರ್ಮಿಕರಿಗೆ ಒಳ್ಳೆಯ ಉದ್ಯೋಗ ಹಾಗೂ ಉತ್ತಮ ವೇತನ ಸಿಗುತ್ತದೆ. ಇದರಿಂದ ಕಾರ್ಮಿಕರ ಕಲ್ಯಾಣವಾಗುತ್ತದೆ. ಅಸಂಘಟಿತ ವಲಯಗಳ ಕಾರ್ಮಿಕರಿಗೆ ಕೌಶಲ ಪ್ರಮಾಣಪತ್ರವನ್ನು ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಕೊಡುತ್ತದೆ ಎಂದು ಹೇಳಿದರು.

ADVERTISEMENT

ಅಸಂಘಟಿತ ವಲಯಗಳಲ್ಲಿರುವ ಓದಿನ ಆಸಕ್ತಿವುಳ್ಳವರನ್ನು ಗುರುತಿಸುವುದು ನ್ಯಾಕ್ ಹಾಗೂ ಇಗ್ನೊದಂಥ ಸಂಸ್ಥೆಗಳ ಆದ್ಯ ಕರ್ತವ್ಯ. ಈ ಕೆಲಸಗಳು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಒತ್ತಾಯಿಸಿದರು.

ಮಕ್ಕಳ ಸಮಾಲೋಚಕಿ ಜೆ.ಸ್ವರ್ಣಕುಮಾರಿ, ‘ಪೋಷಕರು ತಮ್ಮ ಮಕ್ಕಳ ಜತೆ ಹೆಚ್ಚು ಸಮಯ ಕಳೆಯದಿರುವುದು ಇಂದಿನ ಬಹುದೊಡ್ಡ ಸಮಸ್ಯೆ. ಹೀಗಾಗಿ, ಮಕ್ಕಳ ಅಗತ್ಯಗಳ ಬಗ್ಗೆ ಪೋಷಕರು ಅವರೊಂದಿಗೆ ಚರ್ಚಿಸಿ, ಅವುಗಳನ್ನು ಪೂರೈಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.