ADVERTISEMENT

ಇಬ್ಬರು ಎಂಜಿನಿಯರ್‌ಗಳಿಗೆ ಹಿಂಬಡ್ತಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:45 IST
Last Updated 22 ನವೆಂಬರ್ 2017, 19:45 IST

ಬೆಂಗಳೂರು: ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಇಬ್ಬರು ಎಂಜಿನಿಯರ್‌ಗಳ ಹಿಂಬಡ್ತಿಗೆ ಸರ್ಕಾರ ಆದೇಶಿಸಿದೆ.

ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕರಾಗಿದ್ದ ಪಿ.ವಿ. ಚಂದ್ರಶೇಖರ್ ಮತ್ತು ಪ್ರಭುಶರಣ್‌ ಹಿಂಬಡ್ತಿಗೆ ಆದೇಶಿಸಲಾಗಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಈ ಇಬ್ಬರು 2013ರಲ್ಲಿ ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

‘ಸಂಜಯನಗರ ವ್ಯಾಪ್ತಿಯ ಭೂಪಸಂದ್ರದಲ್ಲಿರುವ ಹೊಯ್ಸಳ ಲ್ಯಾಂಡ್‍ಮಾರ್ಕ್ ಅಪಾರ್ಟ್‍ಮೆಂಟ್‌ನ ಕೆಲವು ಫ್ಲ್ಯಾಟ್ ಮಾಲೀಕರು ನಕ್ಷೆಗೆ ವಿರುದ್ಧವಾಗಿ ಹೆಚ್ಚುವರಿ ಕಟ್ಟಡ ಹಾಗೂ ಈಜುಕೊಳ ನಿರ್ಮಿಸುತ್ತಿದ್ದಾರೆ. ಅದನ್ನು ತೆರವುಗೊಳಿಸಬೇಕು’ ಎಂದು ನಗರ ಯೋಜನೆ ಕಚೇರಿಗೆ ಇತರ ಫ್ಲ್ಯಾಟ್‌ಗಳ ಮಾಲೀಕರು ದೂರು ಸಲ್ಲಿಸಿದ್ದರು.

ADVERTISEMENT

ಆದರೂ ಕ್ರಮ ಕೈಗೊಳ್ಳದ ಕಾರಣ ಈ ಇಬ್ಬರು ಅಧಿಕಾರಿಗಳ ವಿರುದ್ಧ ಮಾಲೀಕರು ಲೋಕಾಯುಕ್ತಕ್ಕೂ ದೂರು ನೀಡಿದ್ದರು. ವಿಚಾರಣೆ ನಡೆಸಿದ ಉಪಲೋಕಾಯುಕ್ತರು ಈ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದು, ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.