ADVERTISEMENT

ಉಪವಾಸ ಸತ್ಯಾಗ್ರಹ ಕೈಬಿಟ್ಟ ಕೂಡ್ಲು ಜನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2018, 20:36 IST
Last Updated 4 ಮಾರ್ಚ್ 2018, 20:36 IST

ಬೆಂಗಳೂರು: ಕೂಡ್ಲು ಗೇಟ್‌ ಬಳಿ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘನ ತ್ಯಾಜ್ಯ ಸಂಸ್ಕರಣ ಘಟಕ ಮುಚ್ಚುವಂತೆ ಒತ್ತಾಯಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಶನಿವಾರ ಕೈಬಿಡಲಾಯಿತು.

ಘಟಕದಲ್ಲಿ ವೈಜ್ಞಾನಿಕವಾಗಿ ಕಸ ಸಂಸ್ಕರಣೆಯಾಗುತ್ತಿಲ್ಲ. ರಾಶಿಬಿದ್ದಿರುವ ಕಸದ ದುರ್ವಾಸನೆಯಿಂದ ನೈರ್ಮಲ್ಯ ಹದಗೆಟ್ಟಿದೆ. ರೋಗರುಜಿನ ಕೂಡ ಹರಡುತ್ತಿದೆ ಎಂದು ಶಾಸಕ ಎಂ.ಸತೀಶ್‌ ರೆಡ್ಡಿ ಮತ್ತು ಸ್ಥಳೀಯ ನಿವಾಸಿಗಳು ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

ADVERTISEMENT

ಕೆರೆ ಅಭಿವೃದ್ಧಿಗೆ ಈಗಾಗಲೇ ₹5 ಕೋಟಿ ನೀಡಲಾಗಿದೆ. ಹೆಚ್ಚುವರಿ ₹5 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸುವಂತೆ ಪಾಲಿಕೆ ಜಂಟಿ ಆಯುಕ್ತ (ಘನ
ತ್ಯಾಜ್ಯ ನಿವರ್ಹಣೆ ಮತ್ತು ಆರೋಗ್ಯ) ಸರ್ಫರಾಜ್‌ ಖಾನ್‌ ಅವರಿಗೆ ಮೇಯರ್‌, ಆಯುಕ್ತರು ಸ್ಥಳದಲ್ಲೇ ಸೂಚಿಸಿದರು.

‘ಬೊಮ್ಮನಹಳ್ಳಿ ವಲಯದ ವಾಹನಗಳಿಗೆ ಮಾತ್ರ ಈ ಘಟಕಕ್ಕೆ ಕಸ ಸುರಿಯಲು ಆದೇಶ ನೀಡಲಾಯಿತು. ಇದರಿಂದ ನಿತ್ಯ 10 ಟಿಪ್ಪರ್‌ಗಳು ಮಾತ್ರ ಘಟ
ಕಕ್ಕೆ ಕಸ ಸಾಗಿಸಬೇಕು. ಹಸಿ ಕಸ ಸಾಗಿಸುವಂತಿಲ್ಲ. ಒಣ ಕಸ ಮಾತ್ರ ಸಾಗಿಸಬೇಕು. ಘಟಕದಲ್ಲಿ ಈಗಾಗಲೇ ಸಂಗ್ರಹವಾಗಿರುವ ನಿರುಪಯುಕ್ತ ತ್ಯಾಜ್ಯ ಬೇರೆಡೆ ಸಾಗಿಸಬೇಕು. ಕಸ ಸಂಸ್ಕರಣ ಘಟಕದ ಆವರಣದಲ್ಲಿರುವ ಸ್ಮಶಾನಕ್ಕೆ ಬದಲಿ ದಾರಿ ಕಲ್ಪಿಸುವಂತೆ ಸೂಚಿಸಲಾಗಿದೆ’ ಎಂದು ಮೇಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.