ADVERTISEMENT

ಎರಡು ಪಟ್ಟು ಟಿಡಿಆರ್‌ಗೆ ಅವಕಾಶ

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆಗೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:41 IST
Last Updated 30 ಜುಲೈ 2015, 19:41 IST

ಬೆಂಗಳೂರು: ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಎರಡು ಪಟ್ಟು ಟಿಡಿಆರ್‌ಗೆ (ಅಭಿವೃದ್ಧಿ ಹಕ್ಕುಗಳ ಹಸ್ತಾಂತರ) ಅನುವು ಮಾಡಿಕೊಡುವ ‘ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಮಸೂದೆ’ಗೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ನೀಡಲಾಯಿತು.

ಮಸೂದೆ ಮಂಡಿಸಿದ ನಗರಾ ಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ, ‘ಈ ಹಿಂದೆ ಒಂದೂವರೆ ಪಟ್ಟು ಟಿಡಿಆರ್‌ ನೀಡಲಾಗುತ್ತಿತ್ತು. ಈಗ ಮಾರ್ಗಸೂಚಿ ದರದೊಂದಿಗೆ ಟಿಡಿಆರ್‌ ಜೋಡಣೆ ಮಾಡಲಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್‌ನ ದಯಾನಂದ ಮಾತ ನಾಡಿ, ‘ಈಗ ಕಟ್ಟಡಗಳಿಗೂ ಟಿಡಿಆರ್‌ ನೀಡಲಾಗುತ್ತಿದೆ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಸುಳ್ಳು ಲೆಕ್ಕ ತೋರಿಸಿ ಟಿಡಿಆರ್‌ ಪಡೆಯಲಾಗುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿಯ ಅಶ್ವತ್ಥನಾರಾಯಣ ಮಾತ ನಾಡಿ, ‘ಬೆಂಗಳೂರಿನಲ್ಲಿ ಟಿಡಿಆರ್ ಬಜಾರ್‌, ಟಿಡಿಆರ್‌ ಬ್ಯಾಂಕ್‌ಗಳು ಹುಟ್ಟಿಕೊಂಡಿವೆ. ವ್ಯಾಪಕ ಪ್ರಮಾಣದಲ್ಲಿ ಅವ್ಯವಹಾರ ಇಲ್ಲೆಲ್ಲ ನಡೆಯುತ್ತಿವೆ’ ಎಂದರು.

‘ಯಲಹಂಕ ದಂತಹ ಸಿ ವಲಯದಲ್ಲಿ ಜಾಗ ನೀಡಿ ಯುಬಿ ಸಿಟಿಯಂತಹ ಎ ವಲಯಗಳಲ್ಲಿ ಟಿಡಿಆರ್‌ ಹಕ್ಕುಗಳನ್ನು ಪಡೆಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ ಮಾತನಾಡಿ, ‘ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಟಿಡಿಆರ್‌ ವಿಷಯದಲ್ಲಿ ₨5 ಸಾವಿರ ಕೋಟಿಯ ಅವ್ಯವಹಾರ ನಡೆದಿದೆ. ಈ ಹಗರಣದಲ್ಲಿ ಅನೇಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿ ದರು. ಬಿಜೆಪಿಯ ಸಿ.ಎಚ್‌. ವಿಜಯ ಶಂಕರ್‌ ಮಾತನಾಡಿ, ‘ಖಾಸಗಿ ಬಡಾ ವಣೆಗಳ ನಿರ್ಮಾಣಕ್ಕೆ ಕಾಲಮಿತಿ ಹಾಕ ಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿಯ ಗೋ.ಮಧುಸೂದನ್‌ ಮಾತನಾಡಿ, ‘ನಿವೇಶನ ಹೊಂದಬೇಕು ಎಂಬ ಕಾರಣಕ್ಕೆ ಬೆಂಗಳೂರಿನ ನಿವಾಸಿ ಗಳು ಮೈಸೂರಿನಲ್ಲಿ ನಿವೇಶನ ಖರೀದಿ ಮಾಡುತ್ತಿದ್ದಾರೆ.

ಆ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡುತ್ತಿಲ್ಲ. ಒಂದು ಕಡೆಯಲ್ಲಿ ನಿವೇಶನಗಳ ಬೆಲೆ ಏರುತ್ತಿದೆ. ಇನ್ನೊಂದು ಕಡೆಯಲ್ಲಿ ಹಣ ಮಣ್ಣು ಪಾಲಾಗುತ್ತಿದೆ’ ಎಂದು ಅವರು  ಗಮನ ಸೆಳೆದರು.

ಸಚಿವ ಸೊರಕೆ ಪ್ರತಿಕ್ರಿಯಿಸಿ, ‘ನಿವೇಶನ ಖರೀದಿಸಿದ ಐದು ವರ್ಷ ಗಳಲ್ಲಿ ಮನೆ ನಿರ್ಮಾಣ ಮಾಡ ದಿದ್ದರೆ ನಿವೇಶನ ವಾಪಸ್‌ ಪಡೆಯ ಲಾಗುವುದು ಎಂದು ಈ ಹಿಂದೆ ಎಚ್ಚರಿಕೆ ನೀಡಿದ್ದೆ. ಅದು ಪ್ರಯೋಜನಕ್ಕೆ ಬರಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.