ADVERTISEMENT

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ವ್ಯವಸ್ಥೆ: ಸಚಿವ ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ರಮೇಶ್‌ ಕುಮಾರ್‌
ರಮೇಶ್‌ ಕುಮಾರ್‌   

ಬೆಂಗಳೂರು: ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸುಸಜ್ಜಿತವಾದ ತುರ್ತು ಚಿಕಿತ್ಸಾ ಘಟಕದ (ಐಸಿಯು) ವ್ಯವಸ್ಥೆ ರೂಪಿಸಲು ನಿರ್ಧರಿ
ಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ ಕುಮಾರ್‌ ತಿಳಿಸಿದರು.

ನಗರದಲ್ಲಿ ಮಂಗಳವಾರ ಟ್ರೈಕಾಗ್‌ ಹೆಲ್ತ್‌ ಸರ್ವಿಸ್ ಪ್ರೈವೇಟ್‌ ಲಿಮಿಟಡ್‌ ಆಯೋಜಿಸಿದ್ದ ‘ವೈದ್ಯರ ಸಮೂಹ ಸೇವೆ ಆಧಾರಿತ ಇಸಿಜಿ ವ್ಯವಸ್ಥೆ’ ಅನಾವ
ರಣಗೊಳಿಸಿ ಅವರು ಮಾತನಾಡಿದರು.

‘ಒಂದು ಐಸಿಯು ಘಟಕಕ್ಕೆ 27 ಲಕ್ಷ ವೆಚ್ಚವಾಗುತ್ತದೆ. ಇದನ್ನು ಆಯಾ ಜಿಲ್ಲೆಯ ಶಾಸಕರ, ಸಂಸದರ ನಿಧಿಯಿಂದ ಭರಿಸಲಾಗುವುದು. 15 ಲಕ್ಷ ಶಾಸಕರ ನಿಧಿ, 5 ಲಕ್ಷ ಸಂಸದರ ನಿಧಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಜ್ಯ ನೀಡುವ ನಿಧಿಯಿಂದ 7 ಲಕ್ಷ ನೀಡಲು ನಿರ್ಧರಿಸಿದ್ದೇವೆ’ ಎಂದರು.

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ ಅವರು ಮಾತನಾಡಿ, ‘ದೇಶದಲ್ಲಿ ಹೃದ್ರೋಗದಿಂದಲೇ ಶೇ 25ರಷ್ಟು ಸಾವು ಸಂಭವಿಸುತ್ತವೆ. ಹೀಗೆ ಸಾವನ್ನಪ್ಪುವವರಲ್ಲಿ ಶೇ 25ರಷ್ಟು ಮಂದಿ 40ಕ್ಕಿಂತ ಕಡಿಮೆ ವಯೋಮಾನದವರು. ಒಮ್ಮೊಮ್ಮೆ ಹೃದಯಾಘಾತಕ್ಕೂ ಒಂದು ಗಂಟೆ ಮುಂಚೆ ಮಾಡಿಸಿದ ಇಸಿಜಿ ವರದಿಯೂ ಎಲ್ಲ ಸರಿಯಾಗಿದೆ ಎಂದು ತೋರುತ್ತದೆ. ಇದನ್ನು ತಪ್ಪಾಗಿ ಅರ್ಥೈಸಿದರೆ ವ್ಯಕ್ತಿ ಸಾಯಬಹುದು. ಹೀಗಾಗಿ ಹೃದ್ರೋಗ ಸಮಸ್ಯೆಯಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ’ ಎಂದರು.

‘ಹೃದಯಾಘಾತಕ್ಕೆ ಪ್ರಾಥಮಿಕ ಚಿಕಿತ್ಸೆಯಾಗಿ ರಕ್ತ ಸರಾಗವಾಗಿ ಹರಿಯುವ ಔಷಧಿ ನೀಡಿದರೆ ವ್ಯಕ್ತಿಯನ್ನು ಅಪಾಯದಿಂದ ಪಾರು ಮಾಡಬಹುದು.  ಆಂಬುಲೆನ್ಸ್‌ನಲ್ಲೇ ಆ ಔಷಧಿ ನೀಡುವ ವ್ಯವಸ್ಥೆ ಆರಂಭಿಸಲು ನಿರ್ಧರಿಸಿದ್ದೇವೆ. ಇದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ರೋಗಿ ಆಸ್ಪತ್ರೆಗೆ ಬರುವುದು  ತಡವಾಗಿ ಸಾವಿನ ಅಪಾಯ ತಪ್ಪುತ್ತದೆ’ ಎಂದರು. ‘ಹೃದ್ರೋಗವನ್ನು ರಾಷ್ಟ್ರೀಯ ಪ್ರಮುಖ ರೋಗ ಎಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT