ಬೆಂಗಳೂರು: ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ವಿಜಯನಗರದ ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
‘ವಿಧಾನಸಭಾ ಚುನಾವಣೆ ಪ್ರಯುಕ್ತ ನಗರದಲ್ಲಿ ನೀತಿಸಂಹಿತೆ ಜಾರಿಯಲ್ಲಿದೆ. ಅನುಮತಿ ಪಡೆಯದೆ 150ರಿಂದ 200 ಮಂದಿ ಏಕಾಏಕಿ ಪ್ರತಿಭಟನೆ ನಡೆಸಿದ್ದರು. ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ವಿಜಯನಗರ ಪೊಲೀಸರು ತಿಳಿಸಿದರು.
ಏ. 20ರಂದು ಸಂಜೆ 5.45ರ ಸುಮಾರಿಗೆ ಪೈಪ್ಲೈನ್ ರಸ್ತೆ ಹಾಗೂ ಕೆಳಸೇತುವೆ ಬಳಿ ಪ್ರತಿಭಟನಾಕಾರರು ಸೇರಿದ್ದರು. ಸಂತ್ರಸ್ತೆಯ ಭಾವಚಿತ್ರ ಹಿಡಿದು ಘೋಷಣೆ ಕೂಗುತ್ತಿದ್ದರು. ಚುನಾವಣಾಧಿಕಾರಿ ಕಚೇರಿ ಎದುರೇ ಸೇರಿ ನೀತಿಸಂಹಿತೆ ಉಲ್ಲಂಘಿಸಿದ್ದರು.
ಪ್ರತಿಭಟನಾಕಾರರನ್ನು ಗಮನಿಸಿದ್ದ ಗಸ್ತಿನಲ್ಲಿದ್ದ ಸಿಬ್ಬಂದಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರು. ವಾಪಸ್ ಹೋಗಲು ಪ್ರತಿಭಟನಾಕಾರರು ಹಿಂದೇಟು ಹಾಕಿದ್ದರು. ನಂತರ, ಅವರೆಲ್ಲರನ್ನೂ ವಶಕ್ಕೆ ಪಡೆಯಬೇಕು ಎನ್ನುವಷ್ಟರಲ್ಲಿ ಓಡಿಹೋದರು ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.