ADVERTISEMENT

‘ಕಣಜಕ್ಕೆ ದಾಸಿಮಯ್ಯ ವಚನ ಧ್ವನಿಸುರಳಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:13 IST
Last Updated 22 ಮಾರ್ಚ್ 2018, 20:13 IST
ದೇವರ ದಾಸಿಮಯ್ಯ ಭಾವಚಿತ್ರಕ್ಕೆ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ವಿರೂಪಾಕ್ಷಪ್ಪ, ಪ್ರಭುಲಿಂಗ ಸ್ವಾಮೀಜಿ, ಎಂ.ಡಿ.ಲಕ್ಷ್ಮಿನಾರಾಯಣ, ಎನ್.ಆರ್.ವಿಶುಕುಮಾರ್, ಉಮಾಶ್ರೀ ಪುಷ್ಪ ನಮನ ಸಲ್ಲಿಸಿದರು- ಪ್ರಜಾವಾಣಿ ಚಿತ್ರ
ದೇವರ ದಾಸಿಮಯ್ಯ ಭಾವಚಿತ್ರಕ್ಕೆ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ವಿರೂಪಾಕ್ಷಪ್ಪ, ಪ್ರಭುಲಿಂಗ ಸ್ವಾಮೀಜಿ, ಎಂ.ಡಿ.ಲಕ್ಷ್ಮಿನಾರಾಯಣ, ಎನ್.ಆರ್.ವಿಶುಕುಮಾರ್, ಉಮಾಶ್ರೀ ಪುಷ್ಪ ನಮನ ಸಲ್ಲಿಸಿದರು- ಪ್ರಜಾವಾಣಿ ಚಿತ್ರ   

ಬೆಂಗಳೂರು: ದೇವರ ದಾಸಿಮಯ್ಯ ವಚನಗಳ ಧ್ವನಿಸುರುಳಿಯನ್ನು ಕಣಜ ಜಾಲತಾಣಕ್ಕೆ ಅಳವಡಿಸಲಾಗುವುದು ಎಂದು ಕನ್ನಡ‌ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ದೇವರ ದಾಸಿಮಯ್ಯ 1039ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಕೆಲವು ವಚನಗಳು ಸಾಮಾನ್ಯರಿಗೆ ಸುಲಭಕ್ಕೆ ಅರ್ಥವಾಗುವುದಿಲ್ಲ. ಆದರೆ, ದಾಸಿಮಯ್ಯನ ವಚನಗಳು ಸಣ್ಣ ಮಕ್ಕಳಿಗೂ ಅರ್ಥವಾಗು
ವಂತಿವೆ. ಅವರು ಜನಸಾಮಾನ್ಯ ಸ್ನೇಹಿ ಸಾಹಿತ್ಯ ರಚಿಸಿದ್ದಾರೆ. ಹೆಣ್ಣು– ಗಂಡೆಂಬ ಲಿಂಗ ತಾರತಮ್ಯ ಬಿಟ್ಟು ಸಮಾನತೆಯಿಂದ ಬದುಕಬೇಕೆಂಬ ಸಂದೇಶ ಸಾರಿದ್ದಾರೆ. ಮೌಢ್ಯವನ್ನು ವಚನಗಳ ಮೂಲಕ ವಿಡಂಬನೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳೆಲ್ಲವೂ ಅವರ ವಚನಗಳಲ್ಲಿವೆ ಎಂದರು.

ADVERTISEMENT

ರಾಜ್ಯ ನೇಕಾರರ ಸಮುದಾಯ ಒಕ್ಕೂಟದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಮಾತನಾಡಿ, ‘ರಾಜ್ಯದಲ್ಲಿ 103 ಹಿಂದುಳಿದ ಸಮಾಜಗಳಿವೆ. ಇವುಗಳನ್ನು ಒಟ್ಟುಗೂಡಿಸುವುದು ಮತ್ತು ಸಮಾನತೆ ಕಲ್ಪಿಸುವುದು ಸರ್ಕಾರದ ಆದ್ಯತೆ. ಜಯಂತಿಯನ್ನು ಒಂದೇ ದಿನ ಆಚರಿಸುವುದರಿಂದ ಇಡೀ ಸಮಾಜ ಒಟ್ಟಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಹಾತ್ಮರ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಒಂದು ದಿನ, ಉಳಿದ ದಿನಗಳಲ್ಲಿ ಜಿಲ್ಲಾ, ತಾಲ್ಲೂಕುಮಟ್ಟದಲ್ಲಿ ಆಚರಿಸುವ ವ್ಯವಸ್ಥೆ ಜಾರಿಗೆ ಬರಬೇಕಿದೆ’ ಎಂದರು.

ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷಗೋ.ತಿಪ್ಪೇಶ್ ಮಾತನಾಡಿ, ‘ನೇಕಾರರ ಸಾಲವನ್ನು ರಾಜ್ಯ ಸರ್ಕಾರ ಮಾಡಿ, ನೇಕಾರಿಕೆ ಕಸುಬು ಪ್ರೋತ್ಸಾಹಿಸುತ್ತಿದೆ. ಸಮುದಾಯಕ್ಕೆ ಇನ್ನಷ್ಟು ನೆರವಿನ ಅಗತ್ಯವಿದೆ' ಎಂದರು.

* ದಾಸಿಮಯ್ಯ ಲೌಕಿಕ ಮತ್ತು ಪಾರಮಾರ್ಥಿಕ ಸಾಧನೆ ಮಾಡಿದ ಮಹಾಪುರುಷ. ಅವರ ನಡೆ ನುಡಿಗಳನ್ನು ನಾವು ಅನುಸರಿಸಬೇಕು
– ಪ್ರಭುಲಿಂಗ ಸ್ವಾಮೀಜಿ, ಹರಿಹರ ಸಿದ್ಧಾಶ್ರಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.