ಬೆಂಗಳೂರು: ‘ಉತ್ತಮ ಪ್ರದರ್ಶನ ಕಾಣುತ್ತಿರುವ ಕನ್ನಡ ಸಿನಿಮಾಗಳನ್ನು ತೆಗೆದು ‘ಬಾಹುಬಲಿ–2’ಗೆ ಅವಕಾಶ ನೀಡಿದರೆ ಖಂಡಿತಾ ತೊಂದರೆ ಕೊಡುತ್ತೇವೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಎಚ್ಚರಿಸಿದರು.
ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಮಂಗಳವಾರ ಪ್ರಾರಂಭವಾದ ರಾಜ್ಯ–ರಾಷ್ಟ್ರೀಯ ಪ್ರಶಸ್ತಿ ಹಾಗೂ ಪನೋರಮ ಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾವರೆಕೆರೆ ಹಾಗೂ ಆವಲಹಳ್ಳಿಯಲ್ಲಿ ‘ರಾಜಕುಮಾರ’ ಸಿನಿಮಾವನ್ನು ತೆಗೆದು ಬಾಹುಬಲಿ–2 ಸಿನಿಮಾ ಪ್ರದರ್ಶಿಸಲಿದ್ದಾರೆ ಎಂದು ಅನೇಕರು ದೂರಿದ್ದಾರೆ. ಕನ್ನಡ ಸಿನಿಮಾವನ್ನು ಮುಂದುವರಿಸುವಂತೆ ಚಿತ್ರಮಂದಿರಗಳ ಮಾಲೀಕರನ್ನು ಕೋರಿದ್ದೇನೆ’ ಎಂದರು.
ವಿಧಾನ ಪರಿಷತ್ ಸದಸ್ಯೆ ಜಯಮಾಲ, ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಪ್ರಾದೇಶಿಕ ಸಿನಿಮಾಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದವರನ್ನು ಪರಿಗಣಿಸಬೇಕು’ ಎಂದು ಕೋರಿದರು.
ನಿರ್ದೇಶಕ ಗಿರೀಶ್ ಕಾಸರವಳ್ಳಿ, ‘ನಮ್ಮ ದೇಶದಲ್ಲಿ ಮಾತ್ರ ಕಲಾತ್ಮಕ, ಸಮಾಜಮುಖಿ ಸಿನಿಮಾಗಳಿಗೆ ಮನ್ನಣೆ ಇಲ್ಲ ಎಂದು ಸಾಕಷ್ಟು ಜನ ತಿಳಿದಿದ್ದಾರೆ. ಆದರೆ, ಎಲ್ಲಾ ದೇಶದಲ್ಲೂ ಈ ಪರಿಸ್ಥಿತಿ ಇದೆ. ಅಮೆರಿಕದಲ್ಲಿ ಕಲಾತ್ಮಕ ಚಿತ್ರಗಳ ಸಮೂಹ ರಚಿಸಿಕೊಂಡು ಅಲ್ಲಿ ಅಂತಹ ಸಿನಿಮಾಗಳನ್ನು ಪ್ರದರ್ಶಿಸುತ್ತಾರೆ. ಅಲ್ಲಿ ಅದು ಜನಪ್ರಿಯವಾಗುತ್ತಿದೆ. ಅದೇ ಮಾದರಿಯನ್ನು ನಾವು ಅಳವಡಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.