ಬೆಂಗಳೂರು: ‘ಕನ್ನಡ ಸಾಹಿತ್ಯದಲ್ಲಿ ಬೇಕಾದವರಿಗೆ ಮಾತ್ರ ಮಣೆ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸಂಶೋಧಕ ಪ್ರೊ.ಎಸ್.ವಿದ್ಯಾಶಂಕರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶುಕ್ರವಾರ ನಡೆದ ‘ರಂ.ಶ್ರೀ. ಮುಗಳಿ ಅವರ ಸಮಗ್ರ ಸಾಹಿತ್ಯ: ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬೇಕಾದವರ ಕೃತಿಗಳಾದರೆ ಪ್ರಕಟಗೊಂಡ ನಾಲ್ಕೇ ದಿನಗಳಲ್ಲಿ ಕೃತಿಗಳ ಕುರಿತು ವಿಮರ್ಶೆಯಾಗುತ್ತದೆ. ಆದರೆ, ರಂ.ಶ್ರೀ.ಮುಗಳಿ ಅವರು ಬರೆದ ಅವರ ಕೊನೆಯ ಕೃತಿ ಅಗ್ನಿವರ್ಣ ಕಾದಂಬರಿಯ ಕುರಿತು ವಿಮರ್ಶೆ ಯಾರೂ ಮಾಡಲೇ ಇಲ್ಲ. ಸಾಹಿತ್ಯ ಲೋಕದಲ್ಲಿ ತಾರತಮ್ಯ ನಡೆಯುತ್ತಿದೆ’ ಎಂದು ವಿಷಾದಿಸಿದರು.
‘ಮುಗಳಿ ಅವರು ಕನ್ನಡ ಸಾಹಿತ್ಯ ಚರಿತ್ರೆ ಎಂಬ ಮೌಲಿಕ ಕೃತಿಯನ್ನು ತಪಸ್ಸು ಎನ್ನುವ ರೀತಿಯಲ್ಲಿ ರಚಿಸಿದ್ದಾರೆ. ಸಾಹಿತ್ಯ ಚರಿತ್ರೆಯ ರೂಪುರೇಷೆಗಳನ್ನು ಸಂಪೂರ್ಣ ಕರಗತಮಾಡಿಕೊಂಡಿದ್ದ ಅವರು, ಸಾಹಿತ್ಯವನ್ನು ಓದುವ, ಅರ್ಥೈಸುವ, ವಿಶ್ಲೇಷಿಸುವ ಬಗೆ ಹಾಗೂ ಮೌಲ್ಯಕಟ್ಟುವ ಕಾರ್ಯವನ್ನು ತಮ್ಮ ಈ ಕೃತಿಯಲ್ಲಿ ನಿರ್ವಹಿಸಿದ್ದಾರೆ’ ಎಂದರು.
‘ಕನ್ನಡ ಸಾಹಿತ್ಯ ಚರಿತ್ರೆ ಕೃತಿಯಲ್ಲಿ ದೊಡ್ಡ ಕವಿಗಳಿಗೆ ನೀಡಿರುವ ಸ್ಥಾನವನ್ನು ಸಣ್ಣ ಕವಿಗಳಿಗೆ ನೀಡಿಲ್ಲ. ಸಣ್ಣ ಕವಿಗಳನ್ನು ಅಮುಖ್ಯರಾಗಿ ಪರಿಗಣಿಸಿದ್ದಾರೆ. ಅವರ ಕೃತಿಯಲ್ಲಿ ತಾರತಮ್ಯತೆಯಿದೆ’ ಎಂದು ವಿಶ್ಲೇಷಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ರಂ.ಶ್ರೀ. ಮುಗಳಿ ಅವರು ಕನ್ನಡ ಮತ್ತು ಮರಾಠರ ನಡುವೆ ಸ್ನೇಹ ಕಟ್ಟಿಕೊಟ್ಟವರು. ಮರಾಠಿಗರಲ್ಲಿಯೂ ಕನ್ನಡದ ಬಗೆಗೆ ಪ್ರೀತಿಯನ್ನು ಬೆಳೆಸಿದರು’ ಎಂದರು.
‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯಸ್ಸು ಮುಗಳಿ ಅವರಿಗೆ ಸಲ್ಲಬೇಕು’ ಎಂದು ಅವರು ಹೇಳಿದರು.
ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ಬಿ.ಹೊನ್ನುಸಿದ್ದಾರ್ಥ ಮಾತನಾಡಿ, ‘ಮುಗಳಿ ಅವರನ್ನು ವಿಮರ್ಶಾ ಲೋಕ ಸಂಪೂರ್ಣವಾಗಿ ಕಡೆಗಣಿಸಿದೆ. ಅವರ ಕೃತಿಗಳ ಸಮಗ್ರ ವಿಶ್ಲೇಷಣೆ ನಡೆಯಬೇಕು’ ಎಂದು ಹೇಳಿದರು.
ರಂ.ಶ್ರೀ.ಮುಗಳಿಯವರ ಸೊಸೆ ಶೋಭಾ ಆನಂದ ಮುಗಳಿ, ‘ಪ್ರೇಮಮಯ ವ್ಯಕ್ತಿತ್ವವನ್ನು ಹೊಂದಿದ್ದ ರಂ.ಶ್ರೀ.ಮುಗಳಿಯವರು ಬದುಕನ್ನು ಸಾಹಿತ್ಯದಷ್ಟೇ ಪ್ರೀತಿಸಿದವರು. ಒಂದೇ ಪುಸ್ತಕದಲ್ಲಿ ಎಲ್ಲ ಶತಮಾನಗಳ ವಿಷಯ ಸಿಕ್ಕರೆ ಎಷ್ಟು ಚೆನ್ನ ಎಂದುಕೊಂಡು ಅವಶ್ಯಕವಾದ ಎಲ್ಲಾ ಪುಸ್ತಕಗಳನ್ನು ತರಿಸಿಕೊಂಡು, ಗ್ರಂಥಾಲಯದಲ್ಲಿ ಕುಳಿತು, ಸುದೀರ್ಘ ಅಧ್ಯಯನವನ್ನು ನಡೆಸಿ, ಕನ್ನಡ ಸಾಹಿತ್ಯ ಚರಿತ್ರೆಯನ್ನು ತಪಸ್ಸಿನಂತೆ ರಚಿಸಿದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.