ಬೆಂಗಳೂರು: ಕಾರಿನಲ್ಲಿ ಬಂದು ಸರಗಳವು ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಮಹಾಲಕ್ಷ್ಮಿಲೇಔಟ್ ಪೊಲೀಸರು, ₹ 700 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
‘ಕೆಂಗೇರಿಯ ಪ್ರದೀಪ್, ಪುರುಷೋತ್ತಮ ಹಾಗೂ ಪ್ರಜ್ವಲ್ ಎಂಬುವರನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ಚಿನ್ನದ ಸರಗಳು, ಕಾರು ಹಾಗೂ ಮೂರು ಬೈಕ್ಗಳನ್ನು ಜಪ್ತಿ ಮಾಡಿದ್ದೇವೆ. ಇವರ ಬಂಧನದಿಂದ ಬೆಂಗಳೂರು ಹಾಗೂ ಬಿಡದಿಯಲ್ಲಿ ನಡೆದಿದ್ದ 18 ಸರಗಳವು ಪ್ರಕರಣಗಳು ಪತ್ತೆಯಾಗಿವೆ’ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿದ್ದ ಪುರುಷೋತ್ತಮ, ಮೋಜಿನ ಜೀವನ ನಡೆಸಲು ಹಣ ಹೊಂದಿಸುವುದಕ್ಕಾಗಿ ಸರಗಳವು ಕೃತ್ಯಕ್ಕೆ ಇಳಿದಿದ್ದ. ಬೆಳಿಗ್ಗೆಯಿಂದ ಸಂಜೆವರೆಗೂ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆತ, ರಾತ್ರಿ ಹಾಗೂ ನಸುಕಿನ ವೇಳೆ ಸಹಚರರೊಂದಿಗೆ ತನ್ನ ರಿಟ್ಜ್ ಕಾರಿನಲ್ಲಿ ನಗರ ಸುತ್ತುತ್ತಿದ್ದ. ಈ ವೇಳೆ ಒಂಟಿ ಮಹಿಳೆ ಕಂಡರೆ, ಆರೋಪಿಗಳು ಅವರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದರು.
‘ಆರೋಪಿಗಳು ಆ.17ರಂದು ಶಂಕರಪುರ ಪಾರ್ಕ್ ಬಳಿ ವೃದ್ಧೆಯೊಬ್ಬರ 50 ಗ್ರಾಂನ ಸರ ಎಗರಿಸಿ ಪರಾರಿಯಾಗಿದ್ದರು. ಹೋಟೆಲ್ವೊಂದರ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಬಂಧಿತರ ಕಾರಿನ ದೃಶ್ಯ ಸೆರೆಯಾಗಿತ್ತು. ಅದರ ನೋಂದಣಿ ಸಂಖ್ಯೆ ಆಧರಿಸಿ ಪ್ರಕರಣ ಭೇದಿಸಲಾಯಿತು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.