ಬೆಂಗಳೂರು: ಅಗ್ರಹಾರ ದಾಸರಹಳ್ಳಿಯಲ್ಲಿ ಕೊಳಚೆ ನೀರು ಹರಿಯುವ ಕಾಲುವೆಗೆ ಬಿದ್ದು, ಮೇಲೆ ಬರಲು ಹರಸಾಹಸಪಡುತ್ತಿದ್ದ ಗಣೇಶ್ ಪಾಂಡೆ (40) ಎಂಬಾತನನ್ನು ಅಗ್ನಿಶಾಮಕ ಸಿಬ್ಬಂದಿ ಶನಿವಾರ ರಕ್ಷಿಸಿದ್ದಾರೆ.
ಉತ್ತರಪ್ರದೇಶ ಮೂಲದ ಪಾಂಡೆ, ಕೆಲಸ ಹುಡುಕಿಕೊಂಡು ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಬುದ್ದಿಮಾಂದ್ಯನಾಗಿರುವ ಆತ ಅರೆಬೆತ್ತಲೆ ಸ್ಥಿತಿಯಲ್ಲಿ ಮಾಗಡಿ ರಸ್ತೆ, ವಿಜಯನಗರ ಹಾಗೂ ಅಗ್ರಹಾರ ದಾಸರಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದ.
ಮಧ್ಯಾಹ್ನ 3ರ ಸುಮಾರಿಗೆ ಎಸ್ಬಿಐ ಬ್ಯಾಂಕ್ ಸಮೀಪ ಇರುವ ಸುಮಾರು 10 ಅಡಿ ಅಗಲ ಮತ್ತು ಆಳದ ಕಾಲುವೆ ಬಳಿ ಕುಳಿತಿದ್ದ ಆತ, ಆಯತಪ್ಪಿ ಕೆಳಕ್ಕೆ ಬಿದ್ದಿದ್ದ. ನೆರವಿಗಾಗಿ ಕೂಗಿಕೊಳ್ಳುತ್ತಿದ್ದ ಆತನ ಕಂಡ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದರು. ರಕ್ಷಣಾ ವಾಹನದಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಏಣಿ ಮೂಲಕ ಮೇಲಕ್ಕೆತ್ತಿದ್ದರು.
ಮೈಗೆ ತರಚಿದ ಗಾಯಗಳಾಗಿದ್ದರಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಯಿತು. ಬುದ್ಧಿಮಾಂದ್ಯನಂತೆ ವರ್ತಿಸುತ್ತಿರುವ ಪಾಂಡೆ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ. ಹಾಗಾಗಿ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ವಿಜಯನಗರ ಠಾಣೆ ಪೊಲೀಸರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.