ADVERTISEMENT

ಕಾಲೇಜಿನಲ್ಲಿ ಮಾರಾಮಾರಿ; ವಿದ್ಯಾರ್ಥಿಗೆ ಚಾಕು ಇರಿತ

ತಿಲಕ್‌ನಗರ ಪೊಲೀಸ್‌ ಠಾಣೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:53 IST
Last Updated 29 ಮೇ 2018, 19:53 IST

ಬೆಂಗಳೂರು: ಜಯನಗರದ 36ನೇ ಅಡ್ಡರಸ್ತೆಯಲ್ಲಿರುವ ‘ಎಸ್ಎಸ್ಎಂಆರ್‌ವಿ‘ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಗಲಾಟೆ ಆಗಿದ್ದು, ಒಬ್ಬ ವಿದ್ಯಾರ್ಥಿಯ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ.

ಗಾಯಗೊಂಡಿರುವ 17 ವರ್ಷದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ನೀಡಿರುವ ಹೇಳಿಕೆ ಆಧರಿಸಿ, ಎದುರಾಳಿ ಗುಂಪಿನ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅವರೆಲ್ಲರೂ ಅಪ್ರಾಪ್ತರು. ಹೀಗಾಗಿ, ಹೆಸರು ಬಹಿರಂಗಪಡಿಸಲು ಆಗದು ಎಂದು ತಿಲಕ್ ನಗರ ಪೊಲೀಸರು ತಿಳಿಸಿದರು.

ಮಂಗಳವಾರ ಬೆಳಿಗ್ಗೆ ಶಿಕ್ಷಕರು ತರಗತಿಗೆ ಬರುವುದಕ್ಕೂ ಮುನ್ನ ಪಿಯುಸಿ ವಿದ್ಯಾರ್ಥಿಗಳ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದವು. ಕೆಲ ನಿಮಿಷಗಳ ಬಳಿಕ ತರಗತಿಗೆ ಬಂದ ಶಿಕ್ಷಕ, ಗಲಾಟೆ ಬಗ್ಗೆ ವಿಚಾರಿಸಿದ್ದರು. ಆಗ ವಿದ್ಯಾರ್ಥಿಯೊಬ್ಬ, ಎದುರಾಳಿ ಗುಂಪಿನವರೇ ಗಲಾಟೆಗೆ ಕಾರಣ ಎಂದು ಹೆಸರು ಹೇಳಿದ್ದ.

ADVERTISEMENT

ಅದಾದ ನಂತರ, ಎಲ್ಲ ವಿದ್ಯಾರ್ಥಿಗಳು ಮಧ್ಯಾಹ್ನ ತರಗತಿಯಿಂದ ಹೊರಗೆ ಬಂದಿದ್ದರು. ಹೆಸರು ಹೇಳಿದ್ದ ವಿದ್ಯಾರ್ಥಿಯೊಂದಿಗೆ ಜಗಳ ತೆಗೆದಿದ್ದ ಎದುರಾಳಿ ತಂಡದವರು, ಚಾಕುವಿನಿಂದ ಹೊಟ್ಟೆಗೆ ಇರಿದಿದ್ದರು. ಅದನ್ನು ಕಂಡ ಶಿಕ್ಷಕರು, ಸ್ಥಳಕ್ಕೆ ಹೋಗಿ ಗಲಾಟೆ ಬಿಡಿಸಿದ್ದರು. ಗಾಯಗೊಂಡ ವಿದ್ಯಾರ್ಥಿಯನ್ನು ಅವರೇ ಆಸ್ಪತ್ರೆಗೆ ಕರೆದೊಯ್ದಿದ್ದರು ಎಂದು ಪೊಲೀಸರು ತಿಳಿಸಿದರು.

ಡಿಸಿಪಿ ಭೇಟಿ: ಘಟನೆಯಿಂದಾಗಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸೇರಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾಲೇಜಿನ ಆಡಳಿತ ಮಂಡಳಿಯವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.