ADVERTISEMENT

ಕಿರುತೆರೆ ನಟ ರಕ್ಷಿತ್ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:52 IST
Last Updated 1 ಡಿಸೆಂಬರ್ 2015, 19:52 IST

ಬೆಂಗಳೂರು: ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ, ಕಿರುತೆರೆ ನಟ ರಕ್ಷಿತ್ (ಮಹೇಶ್‌) (25) ಅವರನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ವಿಜಯನಗರ ನಿವಾಸಿಯಾದ ರಕ್ಷಿತ್, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ರಾತ್ರಿ 1.30ರ ಸುಮಾರಿಗೆ ರಕ್ಷಿತ್ ತಮ್ಮ ಮೂವರು ಸ್ನೇಹಿತರ ಜತೆ, ಸ್ವಿಫ್ಟ್ ಕಾರಿನಲ್ಲಿ ಜೆಸಿ ರಸ್ತೆಯ ಮಿನರ್ವ ವೃತ್ತ ಬಳಿ ಬಂದರು. ಈ ವೇಳೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕರ  ತಪಾಸಣೆ ನಡೆಸುತ್ತಿದ್ದ ಸಿಟಿ ಮಾರ್ಕೆಟ್ ಸಂಚಾರ ಠಾಣೆ ಸಿಬ್ಬಂದಿ, ಅವರ ಕಾರನ್ನು ತಡೆದರು. ನಂತರ ಚಾಲನೆ ಮಾಡುತ್ತಿದ್ದ ರಕ್ಷಿತ್‌ ಅವರಿಗೆ ಮದ್ಯಪಾನ ತಪಾಸಣೆ ನಡೆಸಲು ಮುಂದಾದರು.

ಬಾಯಿಗೆ ಆಲ್ಕೋಮೀಟರ್ ಇಟ್ಟು ಪರೀಕ್ಷಿಸಲು ಹೋದಾಗ, ‘ನಾನೊಬ್ಬ ಸೆಲೆಬ್ರಿಟಿ ನಟ. ನನಗೇ ಈ ರೀತಿ ಮಾಡಿ ಅವಮಾನ ಮಾಡುತ್ತೀರಾ? ಇದರ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದ ರಕ್ಷಿತ್ ಪರೀಕ್ಷೆಗೆ ಒಳಪಡಲು ನಿರಾಕರಿಸಿದರು. ಆಗ ಸಿಬ್ಬಂದಿ ಕಲಾಸಿಪಾಳ್ಯ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅವರ ಜತೆಯೂ ವಾಗ್ವಾದ ನಡೆಸಿದಾಗ, ಮೂವರನ್ನೂ ಠಾಣೆಗೆ ಕರೆದೊಯ್ದರು. 

ಪರೀಕ್ಷೆ ನಡೆಸಿದಾಗ ರಕ್ಷಿತ್ ಮಿತಿಮೀರಿ ಮದ್ಯಪಾನ ಮಾಡಿರುವುದು ಗೊತ್ತಾಯಿತು. ನಂತರ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾರು ಜಪ್ತಿ ಮಾಡಿ, ಬಿಟ್ಟು ಕಳುಹಿಸಲಾಯಿತು. ರಕ್ಷಿತ್ ಅವರು ನ್ಯಾಯಾಲಯದಲ್ಲಿ ದಂಡ ಪಾವತಿಸಿ ಕಾರು ಬಿಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.