ಬೆಂಗಳೂರು: ಕುಡಿದು ವಾಹನ ಚಲಾಯಿಸಿದ್ದ ಆರೋಪದಡಿ ಎಸ್.ವಿ.ಐ.ಟಿ. ಶಾಲೆಯ ಬಸ್ ಚಾಲಕ ಕೋಟ್ರೇಶ್ (37) ಎಂಬುವರನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ.
‘ಶಾಲಾ ಮಕ್ಕಳನ್ನು ಮನೆಗೆ ಬಿಡಲು ಕೋಟ್ರೇಶ್, ಬುಧವಾರ ಸಂಜೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಯಲಹಂಕದ ಶೇಷಾದ್ರಿಪುರ ಕಾಲೇಜು ಬಳಿ ಅವರನ್ನು ತಡೆದು ತಪಾಸಣೆ ನಡೆಸಲಾಯಿತು. ಆಗ ಅವರು ಮದ್ಯ ಸೇವಿಸಿದ್ದು ಗೊತ್ತಾಯಿತು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘ಬಳಿಕ ಕೋಟ್ರೇಶ್ ಅವರನ್ನು ಬಂಧಿಸಿ, ಶಾಲಾ ಬಸ್ ಜಪ್ತಿ ಮಾಡಲಾಯಿತು. ಸದ್ಯ ಆರೋಪಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ’
‘ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳನ್ನು ಪರ್ಯಾಯ ವಾಹನದಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು. ಘಟನೆ ಸಂಬಂಧ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಲಾಗಿದ್ದು, ಅವರ ಹೇಳಿಕೆ ಪಡೆಯಲಾಗುವುದು’ ಎಂದು ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.