ಬೆಂಗಳೂರು: ಜಾತಿ ಸಮೀಕ್ಷೆಗೆ ನೇಮಕಗೊಂಡಿರುವ ಗಣತಿದಾರರ ಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಗೆ ಅನುಗುಣವಾಗಿ ಇಲ್ಲ. ಸಮೀಕ್ಷೆಗೆ ಅಗತ್ಯವಿರುವ ಮಾಹಿತಿಯನ್ನೂ ಅವರಿಗೆ ಪೂರ್ಣ ಪ್ರಮಾಣದಲ್ಲಿ ಒದಗಿಸಿಲ್ಲ ಎಂದು ಜೆಡಿಎಸ್ ಆರೋಪಿಸಿದೆ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಜಾತಿ ಸಮೀಕ್ಷೆಗೆ ನೇಮಕಗೊಂಡಿರುವ ಎಲ್ಲ ಗಣತಿದಾರರಿಗೆ ಮಾಹಿತಿ ಕೈಪಿಡಿ ದೊರೆತಿಲ್ಲ. ಕೆಲವೆಡೆ ಗಣತಿದಾರರು ಸಾಂಕೇತಿಕವಾಗಿ ಮಾತ್ರ ಜಾತಿ ಸಮೀಕ್ಷೆ ನಡೆಸುತ್ತಿದ್ದಾರೆ. ಗಣತಿದಾರರು ಕೆಲವೆಡೆ ತಮಗೆ ಸರಿ ಕಂಡಿದ್ದನ್ನು ಮಾಹಿತಿ ನಮೂನೆಯಲ್ಲಿ ಬರೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.
ಸ್ವತಂತ್ರ ಸಂಸ್ಥೆಯಾದ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಕೆಲಸ ಮಾಡುತ್ತಿದೆ. ಮಾಹಿತಿ ಕ್ರೋಡೀಕರಣ ಸರಿಯಾಗಿ ಆಗದಿದ್ದರೆ, ಸರ್ಕಾರದ ಯೋಜನೆಗಳ ಫಲಾನುಭವಿಗಳು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವುದು ಎಲ್ಲ ಜಾತಿಗಳ ಸಮೀಕ್ಷೆ. ಆದರೆ ಇದಕ್ಕೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಅಹಿಂದ ವರ್ಗಗಳ ನಾಯಕರ ಭಾವಚಿತ್ರ ಮಾತ್ರ ಬಳಸಿ ಆಯೋಗವು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದೆ. ಆಯೋಗವು ರಾಜಕೀಯ ಒತ್ತಡ ಮುಕ್ತವಾದ ಹಾಗೂ ವಾಸ್ತವ ಆಧರಿಸಿದ ಜಾತಿ ಸಮೀಕ್ಷೆ ನಡೆಯಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.