ಬೆಂಗಳೂರು: ನ್ಯಾಷನಲ್ ಬಿಬ್ಲಿಕಲ್ ಕ್ಯಾಥೆಕೆಟಿಕಲ್ ಆ್ಯಂಡ್ ಲೆತರ್ಜಿಕಲ್ ಸೆಂಟರ್ನ (ಎನ್ಬಿಸಿಎಲ್ಸಿ) ಸುವರ್ಣ ಮಹೋತ್ಸವ ನಗರದ ಮರಿಯಾ ನಿಕೇತನ ಶಾಲಾ ಮೈದಾನದಲ್ಲಿ ಮಂಗಳವಾರ ನಡೆಯಿತು.
ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ವ್ಯಾಟಿಕನ್ ರಾಯಭಾರಿ ಜಿಯಾಮ್ಬ್ಯಾಟ್ಟಿಸ್ಟ ಡಿಕ್ವಾತ್ರೊ ಇಲ್ಲಿ ಪೂಜಾ ಕೈಂಕಾರ್ಯಗಳನ್ನು ನೆರವೇರಿಸಿ, ಪ್ರಾರ್ಥಿಸಿ ಎಲ್ಲರಿಗೂ ಶುಭ ಹಾರೈಸಿದರು. ಇದೇ ವೇಳೆ ದೇಶದ ವಿವಿಧ ಭಾಗದ ನಾಲ್ವರು ಕಾರ್ಡಿನಲ್ಗಳು ಹಾಗೂ 45 ಬಿಷಪ್ಗಳು ಪಾಲ್ಗೊಂಡಿದ್ದರು.
ಕ್ಯಾರ್ಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ (ಸಿಬಿಸಿಐ) ಅಧ್ಯಕ್ಷ ಕಾರ್ಡಿನಲ್ ಬಸೇಲಿಯಸ್ ಕ್ಲೀಮಿಸ್, ‘ಚರ್ಚ್ಗಳ ಅಸ್ತಿತ್ವವೇ ಕುಸಿಯುತ್ತಿದೆ. ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇತ್ತೀಚೆಗೆ ನಡೆಯುತ್ತಿರುವ ಮೂಲಭೂತವಾದಿ ಚಟುವಟಿಕೆಗಳು ಮತ್ತು ಸಿದ್ಧಾಂತಗಳಿಂದ ಅನೇಕ ಸಂಕಷ್ಟಗಳು ಎದುರಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಈ ದೇಶದಲ್ಲಿ ಚರ್ಚ್ಗಳು ಅನೇಕ ಬಡ ಮಕ್ಕಳಿಗೆ ದಾರಿ ತೋರಿಸಿವೆ. ಹಾಗಾಗಿ ಅಲ್ಪಸಂಖ್ಯಾತರು ಎನ್ನುವ ಒಂದೇ ಕಾರಣಕ್ಕೆ ನಾವು ಭಯಪಡುವ ಅಗತ್ಯವಿಲ್ಲ. ನಮ್ಮ ಭರವಸೆ ಮತ್ತು ಒಳ್ಳೆತನ ನಮ್ಮನ್ನು ಶಕ್ತರನ್ನಾಗಿಸುತ್ತದೆ’ ಎಂದು ಹೇಳಿದರು.
‘ಅಸ್ಪೃಶ್ಯತೆ, ತಾರತಮ್ಯ ಮತ್ತು ಬಹಿಷ್ಕಾರದಂತಹ ಪದ್ಧತಿಗಳ ನಿರ್ಮೂಲನೆಗೆ ಚರ್ಚ್ಗಳು ಕೆಲಸ ಮಾಡಬೇಕು. ಕನಿಷ್ಠ ಮಂದಿರಗಳು ಹಾಗೂ ಸ್ಮಶಾನಗಳಲ್ಲಾದರೂ ಇವುಗಳಿಗೆ ಕಡಿವಾಣ ಹಾಕಬೇಕು’ ಎಂದರು.
‘ಎರಡನೇ ವ್ಯಾಟಿಕನ್ ಕೌನ್ಸಿಲ್ನ ಪ್ರೇರಣೆಯಿಂದ ದೇಶದಲ್ಲಿ 1967ರಲ್ಲಿ ಎನ್ಬಿಸಿಎಲ್ಸಿ ಪ್ರಾರಂಭಿಸಲಾಯಿತು. ಈ ಕೇಂದ್ರದ ಮೂಲಕ ಚರ್ಚ್ಗಳ ಪುನಶ್ಚೇತನ ಕಾರ್ಯ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.