ADVERTISEMENT

ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 19:38 IST
Last Updated 24 ಏಪ್ರಿಲ್ 2018, 19:38 IST

ಬೆಂಗಳೂರು: ಸಿಟಿ ಮಾರ್ಕೆಟ್‌ ಬಳಿ ನಜ್ಮಲ್‌ ಹುಸೇನ್ (20) ಎಂಬುವರನ್ನು ಚಾಕುವಿನಿಂದ ಇರಿದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಅಸ್ಸಾಂನ ಹುಸೇನ್, ಸ್ನೇಹಿತರನ್ನು ಮಾತನಾಡಿಸಲೆಂದು ರಾತ್ರಿ 11 ಗಂಟೆ ಸುಮಾರಿಗೆ ಮಾರ್ಕೆಟ್‌ ಪ್ರದೇಶಕ್ಕೆ ಹೋಗಿದ್ದರು. ಅದೇ ವೇಳೆ ಅವರ ಜತೆ ಜಗಳ ತೆಗೆದಿದ್ದ ಇನ್ನೊಬ್ಬ ಸ್ನೇಹಿತ ಜಮ್ಮಾಖಾನ್‌, ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಸಿಟಿ ಪೊಲೀಸ್‌ ಠಾಣೆಯ ಪೊಲೀಸರು ಹೇಳಿದರು.

ವರ್ಷದ ಹಿಂದಷ್ಟೇ ನಗರಕ್ಕೆ ಬಂದಿದ್ದ ಹುಸೇನ್, ಸೀಗೆಬೇಲಿ ರಸ್ತೆಯ ಖುರೇಶಿ ಮಸೀದಿ ಬಳಿ ಕೊಠಡಿ ಮಾಡಿಕೊಂಡು ನೆಲಸಿದ್ದರು. ಶಿವಾಜಿನಗರದ ಜ್ಯೂಸ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆ ಅಂಗಡಿಯ ಪಕ್ಕದಲ್ಲೇ ಇದ್ದ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಆರೋಪಿ ಜಮ್ಮಾಖಾನ್‌ ಕೆಲಸಕ್ಕಿದ್ದ. ಅಲ್ಲಿಯೇ ಅವರಿಬ್ಬರಿಗೂ ಪರಿಚಯವಾಗಿ ಪರಸ್ಪರ ಸ್ನೇಹಿತರಾಗಿದ್ದರು.

ADVERTISEMENT

‘ಸಿಟಿ ಮಾರ್ಕೆಟ್‌ ಸಮೀಪ ವಾಸವಿದ್ದ ಸ್ನೇಹಿತ ಮಮಾಯಿ ಅವರನ್ನು ಭೇಟಿಯಾಗಲು ಹುಸೇನ್‌ ಹೋಗಿದ್ದರು. ಸ್ನೇಹಿತ ಮಲಗಿದ್ದರಿಂದ ಅವರ ಪತ್ನಿಯೇ ಹುಸೇನ್‌ರನ್ನು ಮಾತನಾಡಿಸಿ ಕಳುಹಿಸಿದ್ದರು. ಅಲ್ಲಿಂದ ವಾಪಸ್‌ ಕೊಠಡಿಯತ್ತ ಹೊರಟಿದ್ದಾಗ ಎದುರಿಗೆ ಬಂದಿದ್ದ ಆರೋಪಿ, ಜಗಳ ತೆಗೆದಿದ್ದ. ಚಾಕುವಿನಿಂದ ಹೊಟ್ಟೆಗೆ ಇರಿದು ಓಡಿಹೋಗಿದ್ದ’

‘ಕಿರುಚಾಟ ಕೇಳಿ ಹೊರಗೆ ಬಂದ ಮಮಾಯಿ ಹಾಗೂ ಅವರ ಪತ್ನಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಹುಸೇನ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.

ಯುವತಿ ವಿಚಾರವಾಗಿ ಜಗಳ: ‘ಮೃತ ಯುವಕ ಹಾಗೂ ಆರೋಪಿ ನಡುವೆ ಯುವತಿಯೊಬ್ಬಳ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು. ಅದೇ ಕಾರಣಕ್ಕೆ ಆರೋಪಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದರು.

‘ಇತ್ತೀಚೆಗಷ್ಟೇ ಕೋಳಿ ಮಾಂಸ ಮಾರಾಟ ಮಳಿಗೆಯ ಕೆಲಸ ಬಿಟ್ಟಿದ್ದ ಆರೋಪಿ, ಬೇರೆಡೆ ಕೆಲಸಕ್ಕೆ ಹೋಗುತ್ತಿದ್ದ. ಆಗಾಗ, ಹುಸೇನ್‌ನನ್ನು ಭೇಟಿ ಆಗುತ್ತಿದ್ದ. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.