ADVERTISEMENT

ಜಯದೇವದಲ್ಲಿ ಮೊದಲ ಸಲ ಲೇಸರ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 20:11 IST
Last Updated 13 ನವೆಂಬರ್ 2017, 20:11 IST
ರೋಗಿಗೆ ಲೇಸರ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲಾಯಿತು. ಡಾ.ಸಿ.ಎನ್‌.ಮಂಜುನಾಥ್‌ ಇದ್ದಾರೆ
ರೋಗಿಗೆ ಲೇಸರ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಲಾಯಿತು. ಡಾ.ಸಿ.ಎನ್‌.ಮಂಜುನಾಥ್‌ ಇದ್ದಾರೆ   

ಬೆಂಗಳೂರು: ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ವೈದ್ಯರು 70ರಿಂದ 80 ವರ್ಷದ ಮೂವರು ರೋಗಿಗಳಿಗೆ ಇದೇ ಮೊದಲ ಬಾರಿಗೆ ಲೇಸರ್‌ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಿದ್ದಾರೆ.

ಹೃದ್ರೋಗ ತಜ್ಞರಾದ ಡಾ.ಇಮಿತ್‌ ಷಾ, ಡಾ.ಸಿ.ಎನ್‌.ಮಂಜುನಾಥ್‌, ಡಾ.ಟಿ.ಆರ್‌.ರಘು, ಡಾ.ಎಲ್‌.ಶ್ರೀಧರ್‌ ಅವರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದೆ.

‘ಎಕ್ಸಿಮರ್‌ ಲೇಸರ್‌ ಕರೋನರಿ ಅತ್ರೆಕ್ಟಮಿ ಎಂಬ ಹೊಸ ಚಿಕಿತ್ಸಾ ವಿಧಾನದ ಮೂಲಕ ತೀವ್ರತರಹದ ಬ್ಲಾಕೇಜ್‌ಗಳನ್ನು ಸರಿಪಡಿಸಬಹುದು. ಕರೊನರಿ ರಕ್ತನಾಳಗಳಲ್ಲಿ ಕಂಡುಬರುವ ಬ್ಲಾಕೇಜ್‌ಗಳು ತುಂಬ ಗಟ್ಟಿಯಾದಾಗ ಸಾಂಪ್ರದಾಯಿಕ ವಿಧಾನದಲ್ಲಿ ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟ್‌ ಚಿಕಿತ್ಸೆ ಮಾಡಲು ಕಷ್ಟಕರ. ಇಂತಹ ಸಂದರ್ಭದಲ್ಲಿ ಲೇಸರ್‌ ಆಂಜಿಯೊಪ್ಲಾಸ್ಟಿ ಮೂಲಕ ಈ ಚಿಕಿತ್ಸೆಯನ್ನು ಸರಳೀಕರಿಸಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರ ಪೈಕಿ ಇಬ್ಬರು 10 ವರ್ಷಗಳ ಹಿಂದೆ ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟ್‌ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈಗ ಅವರ ರಕ್ತನಾಳಗಳು ಕಿರಿದಾಗಿದ್ದು, ಎದೆನೋವು ಜಾಸ್ತಿಯಾಗಿ ಪುನಃ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಈ ಚಿಕಿತ್ಸೆ ಮಾಡಲಾಗಿದೆ’ ಎಂದು ವಿವರಿಸಿದ್ದಾರೆ.

‘ಲೇಸರ್‌ ಕನ್‌ಸೋಲ್‌ಗೆ ಅಳವಡಿಸಲಾದ ಲೇಸರ್‌ ಕ್ಯಾಥೆಟರ್‌ ಹೊರಹೊಮ್ಮಿಸುವ ಆಲ್ಟ್ರಾವೈಲೆಟ್‌ ಲೈಟ್‌ನ ಶಕ್ತಿಯಿಂದಾಗಿ ರಕ್ತ ಚಲನೆಗೆ ತಡೆಯುಂಟು ಮಾಡುವ ಅಂಶವು ಆವಿಯಾಗುತ್ತದೆ. ಇದರಿಂದ ರಕ್ತ ಚಲನೆ ಮತ್ತು ಸ್ಟೆಂಟ್‌ ಅಳವಡಿಕೆಗೆ ಸಹಾಯವಾಗುತ್ತದೆ. ಈ ಚಿಕಿತ್ಸೆಯ ವೇಳೆ ಕಣ್ಣುಗಳ ಸುರಕ್ಷತೆಗಾಗಿ ರೋಗಿ ಹಾಗೂ ವೈದ್ಯರು ಕನ್ನಡಕ ಧರಿಸಬೇಕಿರುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.