ADVERTISEMENT

ಜಾನಪದ ಜಂಗಮನಿಗೆ ಹೃದಯಸ್ಪರ್ಶಿ ಸನ್ಮಾ ನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2014, 19:30 IST
Last Updated 20 ಜುಲೈ 2014, 19:30 IST
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮತ್ತು ಪತ್ನಿ ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಅಭಿನಂದನಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಚಿವ ಎಚ್.ಕೆ.ಪಾಟೀಲ್, ಸಂಸದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್‌ ನಾಯಕ ಬಿ.ಎಲ್.ಶಂಕರ್, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,  ಹಿರಿಯ ಕವಿ ಚನ್ನವೀರ ಕಣವಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಚಿತ್ರದಲ್ಲಿದ್ದಾರೆ	–ಪ್ರಜಾವಾಣಿ ಚಿತ್ರ
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮತ್ತು ಪತ್ನಿ ಮಲ್ಲಮ್ಮ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಅಭಿನಂದನಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಚಿವ ಎಚ್.ಕೆ.ಪಾಟೀಲ್, ಸಂಸದ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್‌ ನಾಯಕ ಬಿ.ಎಲ್.ಶಂಕರ್, ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ, ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಕವಿ ಚನ್ನವೀರ ಕಣವಿ, ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿ­ಷತ್ತಿನ ಅಧ್ಯಕ್ಷ ಮತ್ತು ಜಾನಪದ ತಜ್ಞ ಗೊ.ರು.­ಚನ್ನಬಸಪ್ಪ (ಗೊರುಚ) ಅವರು 85ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಭಾನು­ವಾರ ಅವರ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೊರುಚ ದಂಪತಿ­ಯನ್ನು  ಹೃದಯ ಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಮಾತ­ನಾಡಿ, ‘ಸರ್ಕಾರಿ ನೌಕರಿಯನ್ನು ಹೊಟ್ಟೆ­ಪಾಡಿ­ಗೆಂದು ಭಾವಿಸದೆ, ಸರ್ಕಾರ ಮತ್ತು ಸಮು­ದಾಯದ ನಡುವೆ ಸೇತುವೆ ಕಟ್ಟುವ ಹೊಸ ಜಾಗ ಎನ್ನುವ ಅದ್ಭುತ ಪರಿಕಲ್ಪನೆ ತೋರಿದವರು ಗೊರುಚ’ ಎಂದು ಹೇಳಿದರು.
‘ಅಂತರಂಗ, ಬಹಿರಂಗ ಶುದ್ಧತೆ ಜತೆಗೆ ಮೃದು ವಚನ­ದಿಂದ ಅಜಾತ ಶತ್ರುವಾಗಿ, ನಿರಾಡಂಬರ­ದಿಂದ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿ­ಕೊಂಡಿ­­ರುವ ಗೊರುಚ ಸಾರ್ವಜನಿಕ ಜೀವನ­ದಲ್ಲಿ ರುವ ಎಲ್ಲರಿಗೂ ಮಾದರಿ’ ಎಂದು ಅಭಿಪ್ರಾಯಪಟ್ಟರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ತಮ್ಮನ್ನು ಆಶೆ, ಆಮಿಷ­ಗಳಿಗೆ ಒಳಪಡಿಸುವಂತಹ ಸಂಗತಿಗಳನ್ನು ದೂರ­ವಿಟ್ಟು, ಶ್ರೇಷ್ಠತಮ ಬದುಕು ನಡೆಸಿದ ಗೊರುಚ, ಜನಪದ ಮತ್ತು ಶಿಷ್ಟ ಸಾಹಿತ್ಯದ ನಡುವೆ ಸೇತುವೆ­ಯಾಗಿ ವಿಪುಲ ಸಾಹಿತ್ಯ ಕೃಷಿ ಮಾಡಿದವರು’ ಎಂದು ಹೇಳಿದರು.

‘ತನಗಾಗಿ ಯಾವುದನ್ನೂ ಬಯಸದೆ, ಮಾಸಿಕ ವೇತನದ ಹೊರತಾಗಿ ಬಂದ ಎಲ್ಲ ಗೌರವಧನ ಮತ್ತು ಭತ್ಯೆಗಳನ್ನು ತಾವು ಸೇವೆ ಸಲ್ಲಿಸಿದ ಸಂಘ ಸಂಸ್ಥೆಗಳಿಗೆ ಅರ್ಪಿಸಿದ ನಿಸ್ವಾರ್ಥ ಜೀವಿ ಗೊರುಚ’ ಎಂದು ಶ್ಲಾಘಿಸಿದರು. ಸಂಸದ ಬಿ.ಎಸ್.ಯಡಿಯೂರಪ್ಪ ಮಾತ­ನಾಡಿ, ‘ಶರಣರ ಜೀವನ್ಮುಖಿ ಧೋರಣೆ ಮೈಗೂ­ಡಿ­ಸಿಕೊಂಡು, ಅವರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬದುಕಿರುವ ಗೊರುಚ ಸಾಧನೆ­ಯನ್ನು ಮಾತಾಗಿಸಿದವರು’ ಎಂದು ಬಣ್ಣಿಸಿದರು.

‘ಜನಪದ ಸಾಹಿತ್ಯ ಯಾರಿಗೂ ಬೇಡವಾದ ಕಾಲ­ಘಟ್ಟದಲ್ಲಿ ವಿಶ್ವದ ಮೊಟ್ಟಮೊದಲ ಜನಪದ ವಿಶ್ವವಿದ್ಯಾಲಯ ರೂಪಿಸಿದವರು ಗೊರುಚ’ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೊರುಚ ಅಭಿನಂದನಾ ಗ್ರಂಥ ಸೇರಿದಂತೆ 9 ಕೃತಿಗಳನ್ನು ವಿವಿಧ ಗಣ್ಯರು ಬಿಡುಗಡೆಗೊಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಪುರುಷೋ­ತ್ತಮಾನಂದ ಸ್ವಾಮೀಜಿ,  ಪಿ.ಜಿ.ಆರ್.ಸಿಂಧ್ಯ, ವಿಧಾನ ಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ವಿಶ್ರಾಂತ ಕುಲಪತಿ ಡಾ.ಎಂ.ಎಂ. ಕಲಬುರ್ಗಿ, ಸಂಶೋ­ಧಕ ಎಂ. ಚಿದಾನಂದ ಮೂರ್ತಿ, 
ಅಭಿ­ನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ವಿ ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತ­ರಿದ್ದರು.

ಕಣವಿ ವರದಿ ಜಾರಿಗೆ ಚಿಮೂ ಒತ್ತಾಯ: ನಾಡ­ಗೀತೆ ಸಂಕ್ಷಿಪ್ತಗೊಳಿಸುವ ಕುರಿತಂತೆ ಹಿರಿಯ ಕವಿ ಚೆನ್ನವೀರ ಕಣವಿ  ನೇತೃತ್ವದ ಸಮಿತಿ ನೀಡಿದ ವರದಿ­ಯನ್ನು ಸರ್ಕಾರ ಶೀಘ್ರವೇ ಜಾರಿಗೊಳಿಸ ಬೇಕೆಂದು ಹಿರಿಯ ಸಂಶೋಧಕ ಡಾ.ಎಂ.­ಚಿದಾ­ನಂದ ಮೂರ್ತಿಯವರು ಒತ್ತಾಯಿಸಿದರು.

ಗೊರುಚ ಅಂಚೆ ಚೀಟಿ ಬಿಡುಗಡೆ: ಅಂಚೆ ಇಲಾಖೆ ಹೊರತಂದಿರುವ ಗೊರುಚ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಪರಿಷತ್ತಿಗೆ ₨13 ಲಕ್ಷ ನೀಡಿದ ಗೊರುಚ
ಸಮಾರಂಭದಲ್ಲಿ ಸನ್ಮಾನದ ವೇಳೆ ಅಭಿನಂದನಾ ಸಮಿತಿ ಅರ್ಪಿಸಿದ್ದ ₨11ಲಕ್ಷ ಗೌರವ ಧನ, ಕೇಂದ್ರ ಸಾಹಿತ್ಯ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಯೊಂದಿಗೆ ಬಂದ ₨1 ಲಕ್ಷ ಮತ್ತು ಇಳಕಲ್ ಮಠದ ಸ್ವಾಮೀಜಿ ನೀಡಿದ್ದ ₨1ಲಕ್ಷ ಹೀಗೆ ಒಟ್ಟು ₨13ಲಕ್ಷವನ್ನು ಗೊರುಚ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ನೀಡುವುದಾಗಿ ಘೋಷಿಸಿದರು.

ಹಿರಿಯರ ಸ್ಮರಣೆಗಾಗಿ ‘ಸಾಂಸ್ಕೃತಿಕ ಕೇಂದ್ರ’
‘ಶ್ರೇಷ್ಠ ಸಾಹಿತಿಗಳು, ಕಲಾವಿದರು ಇರುವ ಗ್ರಾಮಗಳಲ್ಲಿ ಅವರ ಸ್ಮರಣೆಗಾಗಿ ಕಲಾಭವನ, ಸಾಹಿತ್ಯ ಭವನಗಳಂತಹ ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಲಾಗುವುದು. ಈ ಯೋಜನೆ ಅನು­ಷ್ಠಾನದ ಸಂದರ್ಭದಲ್ಲಿ ಗೊರುಚ ಅವರ ಮಾರ್ಗದರ್ಶನ ಪಡೆಯುತ್ತೇನೆ’ ಎಂದು  ಗ್ರಾಮೀಣಅ­ಭಿ­ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT