ADVERTISEMENT

ಜಿ. ವೆಂಕಟಸುಬ್ಬಯ್ಯಗೆ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2016, 19:52 IST
Last Updated 26 ಡಿಸೆಂಬರ್ 2016, 19:52 IST
ಜಿ. ವೆಂಕಟಸುಬ್ಬಯ್ಯ ಅವರಿಗೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ ಇದ್ದರು
ಜಿ. ವೆಂಕಟಸುಬ್ಬಯ್ಯ ಅವರಿಗೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. (ಎಡದಿಂದ) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಗೌರವ ಕಾರ್ಯದರ್ಶಿಗಳಾದ ವ.ಚ. ಚನ್ನೇಗೌಡ, ರಾಜಶೇಖರ ಹತಗುಂದಿ ಇದ್ದರು   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿಘಂಟುತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರಿಗೆ ಪರಿಷತ್ತಿನ ‘ಶತಮಾನೋತ್ಸವ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಿ  ಮಾತನಾಡಿ, ‘ವೆಂಕಟಸುಬ್ಬಯ್ಯ ಅವರು ಜೀವನದುದ್ದಕ್ಕೂ ಒಳಿತನ್ನು ಮಾಡುತ್ತ ಬಂದಿದ್ದಾರೆ. ಹೀಗಾಗಿ ಅವರ ಮನಸು ಹಾಗೂ ದೇಹದ ಆರೋಗ್ಯ ಇಂದಿಗೂ ಸುಸ್ಥಿತಿಯಲ್ಲಿದೆ. ಸರ್ಕಾರ ಪ್ರಶಸ್ತಿಗಳನ್ನು ನೀಡುವಾಗ ಹಿರಿಯ ಸಾಧಕರಿಗೆ ಮೊದಲು ಆದ್ಯತೆ ನೀಡುತ್ತಿದೆ. ಇದನ್ನು ಕೆಲವರು  ಹಿರಿಯ ನಾಗರಿಕರಿಗೆ ಮೀಸಲಾದ ಪ್ರಶಸ್ತಿಗಳು ಎಂದು ಲೇವಡಿ ಮಾಡುತ್ತಿದ್ದಾರೆ’ ಎಂದರು.

ಪ್ರೊ.ಜಿ.ವೆಂಕಟಸುಬ್ಬಯ್ಯ  ಮಾತನಾಡಿ, ‘ಪರಿಷತ್ತಿನ ಅಧ್ಯಕ್ಷನಾಗಿದ್ದಾಗ ₹3 ಸಾವಿರ ಅನುದಾನದಲ್ಲಿ ಕಾರವಾರ ಹಾಗೂ ಶ್ರವಣಬೆಳಗೊಳದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿದ್ದೆ. ಆಗ ಸುಮಾರು 5 ಸಾವಿರ ಜನ ಸೇರಿದ್ದರು. ಅಂದು ಪರಿ ಷತ್ತು ಬಡವಾಗಿತ್ತು. ಇಂದು ಸರ್ಕಾರದ ಅನುದಾನದಿಂದ ಶ್ರೀಮಂತವಾಗಿದೆ’ ಎಂದರು.

‘1964ರಲ್ಲಿ ಕನ್ನಡ ನಿಘಂಟು ರಚನೆ ಮಾಡುತ್ತಿದ್ದಾಗ ಬಿಡುವಿನಲ್ಲಿ ತಿಂಡಿ ಸೇವಿಸುವ ರೂಢಿಯಿತ್ತು. ಆಗ ನಿಘಂಟು ರಚನಾ ಸಮಿತಿಯನ್ನು ಜನ ತಿಂಡಿ ತಿನ್ನುವವರ ಸಮಿತಿ ಎಂದು ಲೇವಡಿ ಮಾಡುತ್ತಿದ್ದರು. ನಿಘಂಟನ್ನು ಕಂತುಗಳ ರೂಪದಲ್ಲಿ ಪ್ರಕಟಿಸಿ ಅವರ ಬಾಯಿ ಮುಚ್ಚಿಸಿದ್ದೆವು’ ಎಂದರು.

ಪತ್ರಕರ್ತ ಜೋಗಿ ಮಾತನಾಡಿ,‘ಕನ್ನಡ ಸಾಹಿತ್ಯವನ್ನು ಸಂಪೂರ್ಣವಾಗಿ ಓದಲು ಆಗದವರು ವೆಂಕಟಸುಬ್ಬಯ್ಯ ಅವರ ಇಗೋ ಕನ್ನಡ ನಿಘಂಟು ಹಾಗೂ ಕುಮಾರವ್ಯಾಸ ಭಾರತ ಓದಬೇಕು. ಅವುಗಳಲ್ಲಿ ಕನ್ನಡ ಪದಗಳ ಭಂಡಾರವೇ ಇದೆ. ಅವುಗಳ ಅಧ್ಯಯನದಿಂದ ಬರವಣಿಗೆಯನ್ನು  ಸುಧಾರಿಸಿಕೊಳ್ಳಬಹುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.