ADVERTISEMENT

ತಂದೆಯ ಸಾಹಿತ್ಯ ನನ್ನ ಮೇಲೆ ಪ್ರಭಾವ ಬೀರಿಲ್ಲ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 15:42 IST
Last Updated 24 ಸೆಪ್ಟೆಂಬರ್ 2017, 15:42 IST
ಜಯಂತ್ ಕಾಯ್ಕಿಣಿ
ಜಯಂತ್ ಕಾಯ್ಕಿಣಿ   

ಬೆಂಗಳೂರು: ‘ತಂದೆ ಗೌರೀಶ ಕಾಯ್ಕಿಣಿ ಅವರ ಸಾಹಿತ್ಯ ನನ್ನ ಮೇಲೆ ಪ್ರಭಾವ ಬೀರಿಲ್ಲ. ಅವರ ಕಥೆಗಳನ್ನು ನಾನು ಇದುವರೆಗೂ ಓದಿಲ್ಲ’ ಎಂದು ಜಯಂತ್ ಕಾಯ್ಕಿಣಿ ಅವರು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಪ್ರಕಾರ ಯಾವ ಸಾಹಿತಿಯ ಮಕ್ಕಳಿಗೂ ಸಾಹಿತಿ ಆಗಬೇಕು ಎಂದು ಅನಿಸುವುದಿಲ್ಲ. ಅವರ ಮನೆಯ ವಾತಾವರಣವೇ ಅದಕ್ಕೆ ಕಾರಣ. ‘ಸಾಹಿತಿಗಳದ್ದು ಬರಿ ಮಾತು. ಅದು ಯಾವ ಕೆಲಸಕ್ಕೂ ಬರುವುದಿಲ್ಲ’ ಎಂದು ಚಿಕ್ಕವನಿದ್ದಾಗ ಭಾವಿಸಿದ್ದೆ. ಬಳಿಕ ಅವರ ಸರಳ ಜೀವನ ಶೈಲಿಯ ಪ್ರಭಾವಕ್ಕೆ ಒಳಗಾದೆ’ ಎಂದು ಸ್ಮರಿಸಿದರು.

ADVERTISEMENT

‘ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವದಲ್ಲಿ ತಂದೆಯವರನ್ನು ಅಭಿನಂದಿಸಲು ಆಹ್ವಾನ ಪತ್ರ ಬಂದಿತ್ತು. ಕುಟುಂಬಸ್ಥರೆಲ್ಲರೂ ಬೆಂಗಳೂರಿಗೆ ಹೋಗಬಹುದು. ಅಲ್ಲಿ ಚಲನಚಿತ್ರಗಳನ್ನು ನೋಡಬಹುದು ಎಂದು ಭಾವಿಸಿದ್ದೆ. ಆದರೆ ಅವರು, ಶಿಷ್ಯನ ದೋಣಿ ಉದ್ಘಾಟನಾ ಸಮಾರಂಭವು ಹಿಂದೆಯೇ ನಿಗದಿಯಾಗಿದೆ. ಹೀಗಾಗಿ, ಮಹೋತ್ಸವಕ್ಕೆ ಬರಲು ಸಾಧ್ಯವಿಲ್ಲ ಎಂದು ನಿರಾಕರಿಸಿ ಪತ್ರ ಬರೆದಿದ್ದರು. ಅದನ್ನು ಓದಿ, ನಮ್ಮಪ್ಪ ಎಷ್ಟೊಂದು ಮೂರ್ಖ ಎಂದುಕೊಂಡೆ. ನಂತರದ ದಿನಗಳಲ್ಲಿ ಅವರ ತೀರ್ಮಾನ ಸರಿ ಎಂದು ಅನಿಸಿತು’ ಎಂದು ಸ್ಮರಿಸಿದರು.

‘ನನ್ನ ಜೀವನದ ಮೇಲೆ ಅತ್ಯಂತ ಗಾಢವಾಗಿ ಪ್ರಭಾವ ಬೀರಿದ್ದು ಸೋದರ ಮಾವ. ಬೇರೆ ಬೇರೆ ಆಯಾಮಗಳಲ್ಲಿ ಮನದ ಬಾಗಿಲುಗಳನ್ನು ತೆರೆಸಿದರು. ಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಬರುತ್ತಿದ್ದ ಅಂದದ ಚಿತ್ರಗಳು ಹಾಗೂ ಪ್ರೇಮ ಬರಹಗಳನ್ನು ಸಂಗ್ರಹಿಸಿಡುವ ಹವ್ಯಾಸ ಅವರಿಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾನು ಹಾಗೂ ಅವರ ಮಗ ಅವುಗಳನ್ನು ನೋಡುತ್ತಿದ್ದೆವು, ಓದುತ್ತಿದ್ದೆವು. ಅವುಗಳನ್ನು ಒಂದು ಆಲ್ಬಂ ಮಾಡಿ ನನ್ನ ಮದುವೆಗೂ ಉಡುಗೊರೆಯಾಗಿ ನೀಡಿದ್ದರು. ಅವರ ಉದ್ದೇಶ ಪ್ರೀತಿಯ ಬಗ್ಗೆ ಅರಿವು ಮೂಡಿಸುವುದಾಗಿತ್ತು’ ಎಂದು ನೆನೆಪು ಮಾಡಿಕೊಂಡರು.

‘ಬೆಂಗಳೂರಿಗೆ ಮಹಾನಗರದ ಗತ್ತು ಬಂದಿಲ್ಲ’
‘ಬೆಂಗಳೂರಿಗೆ ಇನ್ನೂ ಮಹಾನಗರದ ಗತ್ತು ಬಂದಿಲ್ಲ. ನಗರ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. 60–70 ವರ್ಷಗಳ ಹಿಂದೆಯೇ ಮುಂಬೈ ಈಗಿನ ಬೆಂಗಳೂರಿನಂತಿತ್ತು’ ಎಂದು ಕಾಯ್ಕಿಣಿ ಅಭಿಪ್ರಾಯಪಟ್ಟರು.

‘ಈ ನಗರದ ಯಾವುದೇ ಮೂಲೆಗೆ ಹೋದರೂ, ಅಲ್ಲಿಯವರು ಬೆಂಗಳೂರಿಗರು ಎಂದು ಅನಿಸಬೇಕು. ಅಂತಹ ವಾತಾವರಣ ಸೃಷ್ಟಿಯಾಗಬೇಕು. ಅದು ಸಾಧ್ಯವಾಗುತ್ತಿಲ್ಲ. ಇಲ್ಲಿ ಸಾರ್ವಜನಿಕ ಸಾರಿಗೆಯೂ ಸರಿಯಾಗಿ ಅಭಿವೃದ್ಧಿಯಾಗಿಲ್ಲ. ಬಾಂಬೆಯಲ್ಲಿ ಬಹುತೇಕರು ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುತ್ತಾರೆ. ದೊಡ್ಡಸ್ತಿಕೆಯ ಮಾನದಂಡಗಳ ಜಿಜ್ಞಾಸೆಗಳು ಅಲ್ಲಿಲ್ಲ. ಇಲ್ಲಿಯೂ ಅದೇ ರೀತಿ ಆಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.