ADVERTISEMENT

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:49 IST
Last Updated 16 ಫೆಬ್ರುವರಿ 2017, 19:49 IST
ಬೆಂಗಳೂರು: ಬಸವೇಶ್ವರನಗರ ಸಮೀಪದ ಮಂಜುನಾಥನಗರದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ತಲೆ ಮೇಲೆ ಕಲ್ಲು ಎತ್ತಿ ಹಾಕಿ ತನ್ನ ಅಣ್ಣ ಪ್ರಕಾಶ್ ರಾವ್ (58) ಎಂಬುವರನ್ನು ಬುಧವಾರ ರಾತ್ರಿ ಹತ್ಯೆಗೈದಿದ್ದಾರೆ. 
 
ಕಾರು ಚಾಲಕರಾಗಿದ್ದ ಪ್ರಕಾಶ್, ಬುಧವಾರ ರಾತ್ರಿ ಕುಡಿದ ಅಮಲಿನಲ್ಲಿ ಪತ್ನಿ–ಮಕ್ಕಳ ಜತೆ ಜಗಳವಾಡಿದ್ದಾರೆ. 78 ವರ್ಷ ವಯಸ್ಸಿನ ತಾಯಿಗೂ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಇದರಿಂದ ಕೆರಳಿದ ಆರೋಪಿ ಗೋವಿಂದ್ ರಾವ್ (30), ಅಣ್ಣನ ಜತೆ ಗಲಾಟೆ ಪ್ರಾರಂಭಿಸಿದ್ದಾನೆ. ವಾಗ್ವಾದ ಜೋರಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ತಳ್ಳಾಟದಲ್ಲಿ ಪ್ರಕಾಶ್ ಕೆಳಗೆ ಬಿದ್ದಾಗ, ಆರೋಪಿಯು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ.
 
ಕೂಡಲೇ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
 
ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವಿಂದ್, ಪತ್ನಿ ಜತೆ ನೆಲಮಂಗಲದಲ್ಲಿ ನೆಲೆಸಿದ್ದ. ತಾಯಿಯನ್ನು ನೋಡಲು ಆಗಾಗ್ಗೆ ಮಂಜುನಾಥನಗರದ ಮನೆಗೆ ಬಂದು ಹೋಗುತ್ತಿದ್ದ. ಅದೇ ರೀತಿ ಬುಧವಾರ ರಾತ್ರಿ 12 ಗಂಟೆಗೆ ಆತ ಬಂದಾಗ ಗಲಾಟೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.