ADVERTISEMENT

‘ನಮ್ಮ ಮೆಟ್ರೊ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 20:09 IST
Last Updated 28 ಡಿಸೆಂಬರ್ 2016, 20:09 IST
‘ನಮ್ಮ ಮೆಟ್ರೊ’
‘ನಮ್ಮ ಮೆಟ್ರೊ’   

ಮಾರ್ಚ್‌ 18
ಸಿಲ್ಕ್ ಬೋರ್ಡ್‌– ಕೆ.ಆರ್‌.ಪುರ ಮಾರ್ಗಕ್ಕೆ ಡಿಪಿಆರ್‌

ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆಯಲ್ಲೇ ಸಿಲ್ಕ್‌ಬೋರ್ಡ್‌– ಕೆ.ಆರ್‌.ಪುರ ನಡುವೆ  ಹೊಸ ಮಾರ್ಗ ನಿರ್ಮಿಸುವ ಪ್ರಸ್ತಾಪ ಸೇರ್ಪಡೆ ಮಾಡುವುದಾಗಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿ ಪ್ರಕಟಿಸಿದರು. ನವೆಂಬರ್‌ ತಿಂಗಳಲ್ಲಿ ಈ  ಮಾರ್ಗದ ವಿಸ್ತೃತ ಯೋಜನಾ ವರದಿಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಪ್ರಕಟಿಸಿತು

ಏಪ್ರಿಲ್‌ 19
ಸುರಂಗದಿಂದ ಹೊರಬಂದ ಗೋದಾವರಿ

ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್‌ವರೆಗೆ  ಸುರಂಗ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ‘ಗೋದಾವರಿ’ ಮಂಗಳವಾರ ಗುರಿ ಪೂರೈಸಿ ಮೆಜೆಸ್ಟಿಕ್‌ನಲ್ಲಿ ಸುರಂಗದಿಂದ ಹೊರಬಂತು.

ಖೋಡೆ ವೃತ್ತದ ಸಮೀಪ 60 ಅಡಿಗಳಷ್ಟು ನೆಲದಾಳದಲ್ಲಿ ಬಂಡೆ ಕಲ್ಲನ್ನು ಕೊರೆಯುವಾಗ ‘ಗೋದಾವರಿ’ಯ ‘ಕಟರ್‌ಹೆಡ್‌’ಗೆ ಹಾನಿಯಾಗಿತ್ತು. ಇಟಲಿಯಿಂದ ಅದನ್ನು ತರಿಸಿ ಕೆಲಸ ಮುಂದುವರಿಸಲಾಗಿತ್ತು

ಏಪ್ರಿಲ್‌ 29
ಸುರಂಗದಲ್ಲಿ ರೈಲು ಸಂಚಾರ ಶುರು

ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ  ಸುರಂಗ ಮಾರ್ಗದಲ್ಲಿ (ಕಬ್ಬನ್‌ ಉದ್ಯಾನದಿಂದ–ಮಾಗಡಿ ರಸ್ತೆ ನಿಲ್ದಾಣವರೆಗೆ)  ರೈಲು ಸಂಚಾರ ಆರಂಭ. ಇದು ದಕ್ಷಿಣ ಭಾರತದ ಮೊದಲ ಮೆಟ್ರೊ ಸುರಂಗ ಮಾರ್ಗ ಎಂಬ  ಖ್ಯಾತಿಗೂ ಪಾತ್ರವಾಗಿದೆ..

ಜೂನ್‌  8
ಕೆಲಸ ಪೂರ್ಣಗೊಳಿಸಿದ ‘ಕಾವೇರಿ’

ಚಿಕ್ಕಪೇಟೆಯಿಂದ-ಮೆಜೆಸ್ಟಿಕ್‌ ನಡುವಿನ ನಮ್ಮ ಮೆಟ್ರೊ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿದ ಕಾವೇರಿ ಯಂತ್ರ  ಮೆಜೆಸ್ಟಿಕ್‌ ಬಳಿ ಹೊರಬಂತು.   2015ರ ಮಾರ್ಚ್‌ನಲ್ಲಿ ಚಿಕ್ಕಪೇಟೆಯಿಂದ ಸುರಂಗ ಕೊರೆಯಲು ಆರಂಭಿಸಿತ್ತು.

ಸೆಪ್ಟೆಂಬರ್‌ 14
ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕಕ್ಕೆ ಪ್ರಸ್ತಾವ

ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಸರ್ವೀಸಸ್‌ (ರೈಟ್ಸ್‌) ಸಂಸ್ಥೆ ಸೂಚಿಸಿದ 9 ಮಾರ್ಗಗಳ ಪೈಕಿ ಒಂದನ್ನು ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಒಂಬತ್ತು ಮಾರ್ಗಗಳ ವಿವರಗಳನ್ನು  ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ನಲ್ಲಿ  ಪ್ರಕಟಿಸಿ  ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತು.

ಸೆಪ್ಟೆಂಬರ್‌  23
ಮೊದಲ ಹಂತ –ಸುರಂಗ ಪೂರ್ಣ

ಚಿಕ್ಕಪೇಟೆ ಮತ್ತು ಮೆಜೆಸ್ಟಿಕ್‌ ನಡುವೆ ಸುರಂಗ ಕೊರೆಯುವಾಗ ಅನೇಕ ಅಡೆಗಡೆಗಳನ್ನು ಎದುರಿಸಿದ್ದ  ಕೃಷ್ಣಾ   ಯಂತ್ರವು  ಮೆಜೆಸ್ಟಿಕ್‌ನಲ್ಲಿ ಹೊರಗೆ ಬಂತು.  ನಾಗಸಂದ್ರ–ಯಲಚೇನಹಳ್ಳಿ ನಡುವಿನ ಉತ್ತರ ಮತ್ತು ದಕ್ಷಿಣದ ಮಾರ್ಗಗಳು ಪರಸ್ಪರ  ಜೋಡಣೆಯಾದವು.  ನಮ್ಮ ಮೆಟ್ರೊ ಮೊದಲ ಹಂತದಲ್ಲಿನ ಸುರಂಗ ಕೊರೆಯುವ ಎಲ್ಲ ಕಾಮಗಾರಿಗಳು ಪೂರ್ಣಗೊಂಡವು.

ನವೆಂಬರ್‌ 20
ದಕ್ಷಿಣದಲ್ಲಿ ಮೆಟ್ರೊ ಪ್ರಾಯೋಗಿಕ ಸಂಚಾರ

ಬಸವನಗುಡಿ ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿ ನಿಲ್ದಾಣದ ನಡುವೆ  ಪ್ರಯೋಗಾರ್ಥ ಮೆಟ್ರೊ ರೈಲು ಸಂಚಾರ ಆರಂಭ. ಮೂರು ವರ್ಷಗಳ ಹಿಂದೆಯೇ ಈ ಮಾರ್ಗ ಸಿದ್ಧವಾಗಿತ್ತಾದರೂ, ಕೆ.ಆರ್‌. ಮಾರುಕಟ್ಟೆ– ಮೆಜೆಸ್ಟಿಕ್‌ ನಡುವೆ ಸುರಂಗ ಮಾರ್ಗ ಪೂರ್ಣಗೊಳ್ಳದ ಕಾರಣ ರೈಲನ್ನು ಪೀಣ್ಯ ಡಿಪೊದಿಂದ  ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗೆ ತರುವುದು ಸಾಧ್ಯವಾಗಿರಲಿಲ್ಲ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.