ADVERTISEMENT

ನಿರ್ವಾಹಕನ ಸಮಯಪ್ರಜ್ಞೆ ಬಸ್‌ ಅಪಘಾತದಿಂದ ಪಾರು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ಬೆಂಗಳೂರು: ಯಲಹಂಕ ಸಮೀಪದ ಎನ್‌ಇಎಸ್‌ ಜಂಕ್ಷನ್‌ ಬಳಿ ಭಾನುವಾರ ಸಂಭಾವ್ಯ ಅಪಘಾತವು   ಬಸ್‌ ನಿರ್ವಾಹಕರೊಬ್ಬರ ಸಮಯಪ್ರಜ್ಞೆಯಿಂದ ತಪ್ಪಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

‘ಯಲಹಂಕ ನ್ಯೂ ಟೌನ್‌ನಿಂದ ಮೆಜೆಸ್ಟಿಕ್‌ ಬಸ್‌ ನಿಲ್ದಾಣದತ್ತ ಹೋಗುತ್ತಿದ್ದ ಬಿಎಂಟಿಸಿ ಬಸ್‌ನ್ನು ಚಾಲಕ ಸುಭಾಷ್‌ ಎಂಬುವರು ಚಲಾಯಿಸುತ್ತಿದ್ದರು. ಚಾಲನೆ ವೇಳೆಯೇ ಪ್ರಜ್ಞೆ ಕಳೆದುಕೊಂಡ ಸುಭಾಷ್‌, ಸ್ಟೇರಿಂಗ್‌ ಮೇಲೆಯೇ ಮಲಗಿದರು’.

‘ಅದನ್ನು ಗಮನಿಸಿದ ನಿರ್ವಾಹಕ ದಾದಾಪೀರ್‌, ಕೂಡಲೇ ಚಾಲಕನ ಆಸನ ಬಳಿ ಹೋಗಿ ಬ್ರೇಕ್‌್ ಒತ್ತಿ ಹಿಡಿದರು. ಅಷ್ಟರಲ್ಲೇ ಬಸ್‌ ಎದುರಿಗಿದ್ದ ಕಾರಿಗೆ  ಡಿಕ್ಕಿ ಹೊಡೆದಿತ್ತು. ಬ್ರೇಕ್‌ ಒತ್ತದಿದ್ದರೆ ರಸ್ತೆ ಪಕ್ಕದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಉರುಳಿ ಬೀಳುವ ಸಾಧ್ಯತೆ ಇತ್ತು’ ಎಂದು ಪೊಲೀಸರು ತಿಳಿಸಿದರು.
‘ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರೆಲ್ಲರಿಗೂ  ಟಿಕೆಟ್‌ ಕೊಡುತ್ತಿದ್ದೆ. ದಿಢೀರ್‌ ಬಸ್‌್ ಅಲುಗಾಡಲು ಆರಂಭಿಸಿತ್ತು.

ಚಾಲಕರನ್ನು ನೋಡಿದಾಗ ಅವರು ಸ್ಟೇರಿಂಗ್ ಮೇಲೆ ಮಲಗಿದ್ದರು. ಕೂಡಲೇ ಹೋಗಿ ಬ್ರೇಕ್‌ ಒತ್ತಿದೆ’ ಎಂದು ನಿರ್ವಾಹಕ ದಾದಾಪೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಸ್‌ ನಿಂತ ಬಳಿಕ  ಚಾಲಕ ಸುಭಾಷ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಏನಾಗಿದೆ ಎಂಬುದು ಗೊತ್ತಾಗಿಲ್ಲ’ ಎಂದು ಮಾಹಿತಿ ನೀಡಿದರು. ‘ಘಟನೆ ಬಗ್ಗೆ ಕಾರು ಚಾಲಕ, ನಿರ್ವಾಹಕರ ಹೇಳಿಕೆ ಪಡೆಯಲಾಗಿದೆ. ಸುಭಾಷ್‌ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಅವರ ಹೇಳಿಕೆ ಪಡೆಯಲಾಗುವುದು. ಸದ್ಯ ಬಸ್‌ ಜಪ್ತಿ ಮಾಡಲಾಗಿದೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.